Homeರಾಜ್ಯಹೇಮಾವತಿ ಹಿನ್ನೀರಿನಲ್ಲಿರುವ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು

ಹೇಮಾವತಿ ಹಿನ್ನೀರಿನಲ್ಲಿರುವ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು

Three youths who went for swimming in the backwaters of Hemavati drowned

ಹಾಸನ,ಜೂನ್‌.15- ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ವಾಪಾಸ್‌‍ ಆಗುವಾಗ ಇಲ್ಲಿನ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ ಬಳಿ ಈಜಾಡಲು ನೀರಿಗಿಳಿದ ಮೂವರು ಯುವಕರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.ಬೆಂಗಳೂರು ಮೂಲದ ಚರಣ್‌ (20), ಮಿಲನ್‌ (23), ಮಣಿಕಂಠ (20) ಮೃತ ಯುವಕರು ಎಂದು ಗುರುತಿಸಲಾಗಿದೆ.

ಆರು ಯುವಕರು ಹಾಗೂ ನಾಲ್ವರು ಯುವತಿಯರು ಒಟ್ಟಾಗಿ ಐದು ಸ್ಕೂಟಿಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ನಿನ್ನೆ ವಾಪಾಸ್‌‍ ಆಗುತ್ತಿದ್ದರು. ಬರುವಾಗ ಗೂಗಲ್‌ ಮ್ಯಾಪ್‌ನಲ್ಲಿ ಪ್ರವಾಸಿ ತಾಣ ಹುಡುಕಿ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ ವೀಕ್ಷಿಸಲು ಬಂದಿದ್ದರು.

ಚರ್ಚ್‌ ಬಳಿ ಹೇಮಾವತಿ ನದಿಯ ಹಿನ್ನೀರಿಯಲ್ಲಿ ಈಜಲು ಮೂವರು ಯುವಕರು ಇಳಿದಿದ್ದರು. ಉಳಿದವರು ದಡದಲ್ಲಿ ಕುಳಿತಿದ್ದರು. ಈಜು ಬಾರದ ಕಾರಣ ಮೂವರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಉಳಿದ ಸ್ನೇಹಿತರು ನೀರಿನಲ್ಲಿ ಮುಳುಗುವುದನ್ನು ಕಂಡು ಕಿರುಚಾಡಿದ್ದಾರೆ. ಆದರೆ ಇವರನ್ನು ಹೊರತುಪಡಿಸಿ ಬೇರೆ ಯಾರು ಸ್ಥಳದಲ್ಲಿ ಇರಲಿಲ್ಲ. ಯಾರಿಗೂ ಈಜು ಬಾರದೇ ಇದ್ದಿದ್ದರಿಂದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಹಿಸಿ ಇಬ್ಬರ ಯುವಕರ ಶವವನ್ನು ಹೊರತೆಗೆದಿದ್ದಾರೆ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಮತ್ತೋಬ್ಬ ಯುವಕನ ಶವ ಶೋಧ ಕಾರ್ಯ ಮುಂದುವರೆಸಿ ಪತ್ತೆ ಮಾಡಲಾಗಿದೆ. ಗೊರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News