ಬೆಂಗಳೂರು,ಜೂ.26-ಪ್ರಿಯತಮೆಯ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿ ಪುದುಚೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆಆರ್ಪುರ ಠಾಣೆ ಪೊಲೀಸರು ಬಂಧಿಸಿ ನಗರಕ್ಕೆ ಕರೆತರುತ್ತಿದ್ದಾರೆ. ಪ್ರೇಯಸಿ ಶ್ವೇತಾ ಜೊತೆ ಕೇತನ್ ಪುದುಚೇರಿಗೆ ಹೋಗಿ ನಂತರ ಅವರಿಬ್ಬರು ಬೇರೆ ಬೇರೆಯಾಗಿ ತಲೆಮರೆಸಿಕೊಂಡಿದ್ದರು.
ಶ್ವೇತಾ ಪುದುಚೇರಿಯ ರೈಲ್ವೆ ನಿಲ್ದಾಣದ ಬಳಿ ಬಂಧನವಾಗುತ್ತಿದ್ದಂತೆ ಪುದುಚೇರಿಯಲ್ಲಿದ್ದ ಕೇತನ್ ಸಿಕ್ಕಿ ಬೀಳುವ ಭಯದಲ್ಲಿ ವಾಪಸ್ ತಮಿಳುನಾಡಿಗೆ ಬಂದು ನಂತರ ಪುನಃ ಪುದುಚೇರಿಗೆ ಹೋಗಿ ಬೀಚ್ನಲ್ಲಿ ಸುತ್ತಾಡುತ್ತಿದ್ದನು. ಆರೋಪಿ ಬಂಧನಕ್ಕಾಗಿ ರಚಿಸಲಾಗಿದ್ದ ಮೂರು ತಂಡಗಳು ಆರೋಪಿಗಾಗಿ ಒಂದು ತಮಿಳುನಾಡಿನಲ್ಲಿ, ಇನ್ನೊಂದು ತಂಡ ಆಂಧ್ರಪ್ರದೇಶದಲ್ಲಿ, ಮತ್ತೊಂದು ಪುದುಚೇರಿಯಲ್ಲೇ ಬೀಡು ಬಿಟ್ಟಿತ್ತು.
ಆರೋಪಿತೆ ಶ್ವೇತಾ ಬಂಧನವಾದ ಸಂದರ್ಭದಲ್ಲಿ ಪ್ರಿಯಕರ ಕೇತನ್ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೂ ಸಹ ಪೊಲೀಸರು ತಾಂತ್ರಿಕ ನೆರವಿನಿಂದ ಆರೋಪಿ ಪುದುಚೇರಿಯಲ್ಲೇ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರು ವಶದಲ್ಲಿರುವ ಆರೋಪಿ ಶ್ವೇತಾಳನ್ನು ವಿಚಾರಣೆಗೆ ಒಳಪಡಿಸಿ ತ್ರಿವಳಿ ಕೊಲೆ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಸ್ವಂತ ಉದ್ಯಮ ಪ್ರಾರಂಭಿಸಲು ಈ ಇಬ್ಬರು ಸೇರಿಕೊಂಡು ಸಾಲ ಮಾಡಿದ್ದಾರೆ. ಆ ಸಾಲ ತೀರಿಸಲು ಪೋಷಕರನ್ನು ಶ್ವೇತಾ ಗೋಳಾಡಿಸುತ್ತಿದ್ದಳು.ಲಿವಿಂಗ್ ಟು ಗೆದರ್ನಲ್ಲಿ ಪ್ರಿಯಕರನ ಜೊತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಮಗಳ ವರ್ತನೆಗೆ ಪೋಷಕರು ಅಸಮಾಧಾನಗೊಂಡಿದ್ದರು.
ಮಗಳನ್ನು ತಿದ್ದಿ ಆಕೆಯನ್ನು ವಾಪಸ್ ಮನೆಗೆ ಕರೆದೊಯ್ಯಲು ಪೋಷಕರು ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು.ಇತ್ತ ಸಾಲ ತೀರಿಸಲು ಹಣ ಕೊಡದ ಪೋಷಕರ ಮೇಲೆ ಶ್ವೇತಾ ಹಗೆ ಸಾದಿಸುತ್ತಿದ್ದಳು. ಹೇಗಾದರೂ ಮಾಡಿ ಅವರಿಂದ ಹಣ ಪಡೆದುಕೊಳ್ಳಬೇಕೆಂದು ಜಗಳವಾಡಿದ್ದಳು. ಸೋಮವಾರ ರಾತ್ರಿ ತಾಯಿಯನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿ ನಂತರ ಅವರನ್ನು ಹುಡುಕಿಕೊಂಡು ಬಂದ ತಂದೆ ಹಾಗೂ ಸಹೋದರಿಯನ್ನೂ ಸಹ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬೈಕ್ನಲ್ಲಿ ಇಬ್ಬರೂ ತಮಿಳುನಾಡಿಗೆ ಹೋಗಿ ನಂತರ ಪುದುಚೇರಿಗೆ ಬಂದು ತಲೆಮರೆಸಿಕೊಂಡಿದ್ದರು.
ಇದೀಗ ಇಬ್ಬರೂ ಪುದುಚೇರಿಯಲ್ಲೇ ಬಂಧನವಾಗಿದ್ದು, ಪೊಲೀಸರು ಅವರಿಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇನ್ನಷ್ಟು ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಒಟ್ಟಾರೆ ತ್ರಿವಳಿ ಕೊಲೆಗೆ ನಿಖರ ಕಾರಣ ಏನೆಂಬುವುದು ಇಬ್ಬರ ವಿಚಾರಣೆ ಮುಗಿದ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿವೆ.
