ಬೆಂಗಳೂರು,ಮೇ 20- ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ವಂಚಕರ ಗ್ಯಾಂಗ್ವೊಂದು ಜ್ಯುವೆಲರಿಶಾಪ್ ಮಾಲೀಕರಿಗೆ ಒಂದಿಂಚೂ ಅನುಮಾನ ಬಾರದಂತೆ ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಪರೇಶ್ ಸೋನಿ, ಚಂದ್ರಶೇಖರ್ ರಾವ್ ಮತ್ತು ಶ್ಯಾಮ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಗ್ಯಾಂಗ್ ಬಂಧನಕ್ಕೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹೋಲ್ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿದ ಗ್ಯಾಂಗ್ ನಗರ್ತಪೇಟೆಯಲ್ಲಿರುವ ಮೆಹ್ತಾ ಗೋಲ್್ಡ ಜ್ಯುವೆಲರಿ ಅಂಗಡಿ ಮಾಲೀಕರಾದ ಮಹೇಂದ್ರಕುಮಾರ ಡಿ ಜೈನ್ ಅವರಿಗೆ ಪಂಗನಾಮ ಹಾಕಿ 1 ಕೆಜಿ 250 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ದೋಚಿ ವಂಚಕರು ಪರಾರಿಯಾಗಿದ್ದಾರೆ.
ಮೇ 16ರಂದು ಬೆಳಗ್ಗೆ ಮಹೇಂದ್ರಕುಮಾರ್ ಅವರು ಜ್ಯುವೆಲರಿ ಅಂಗಡಿಯಲ್ಲಿದ್ದಾಗ ಸೇಲ್್ಸ ಮ್ಯಾನೇಜರ್ ಗೌತಮ್ ಎಂಬಾತ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಾಹಿ ಎಂಟರ್ಪ್ರೈಸಸ್ನ ಪರೇಶ್ ಸೋನಿ ಎಂಬುವರು ಹೋಲ್ಸೇಲ್ ಚಿನ್ನದ ವ್ಯಾಪಾರಿಯಾಗಿದ್ದು, ನಮ ಬಳಿಯಿಂದ ಒಡವೆಗಳನ್ನು ಖರೀದಿಸುವ ಸಲುವಾಜಕಗಿ ಆಭರಣಗಳನ್ನು ನೋಡುವುದಾಗಿ ಹೇಳಿದ್ದಾರೆಂದು ಮಾಲೀಕರಿಗೆ ತಿಳಿಸಿದ್ದಾರೆ.
ಅಂಗಡಿಯ ಸಿಬ್ಬಂದಿ ವಿಷಯ ತಿಳಿಸಿದ ನಂತರ ಮ್ಯಾನೇಜರ್, ಹೋಲ್ಸೇಲ್ ಚಿನ್ನದ ವ್ಯಾಪಾರಿ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕಿಲ್ಲ. ಪರೇಶ್ ಸೋನಿಗೆ ಸೇರಿದ ಯಾವುದೇ ಎಂಟರ್ಪ್ರೈಸಸ್ ಇಲ್ಲ ಎಂಬುದು ಮಹೇಂದ್ರಕುಮಾರ್ ಅವರಿಗೆ ಗೊತ್ತಾಗಲೇ ಇಲ್ಲ.ದೊಡ್ಡ ಆರ್ಡರ್ ಬಂದಿದೆ ಎಂದು ನಂಬಿದ ಜ್ಯುವೆಲರಿ ಮ್ಯಾನೇಜರ್ ಮಾಲೀಕರ ಸೂಚನೆಯಂತೆ 3 ಕೆಜಿ ಚಿನ್ನಾಭರಣಗಳನ್ನು ಬ್ಯಾಗ್ನಲ್ಲಿಟ್ಟುಕೊಂಡು ಸೇಲ್ಸ್ ಮ್ಯಾನ್ ಪ್ರಕಾಶ್ ಹಾಗೂ ಸೇಲ್ಸ್ ಮ್ಯಾನೇಜರ್ ಗೌತಮ್ಗೆ ಕಳುಹಿಸಿದ್ದಾರೆ.
ಆಭರಣಗಳನ್ನು ತೆಗೆದುಕೊಂಡು ಬರುತ್ತಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಪರೇಶ್ ಸೋನಿ ತನಗೂ ಹಾಗೂ ತನ್ನ ವ್ಯವಹಾರಕ್ಕೂ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ಲೋಟಸ್ ಜ್ಯುವೆಲರ್ ಮತ್ತು ಮಾಹಿ ಎಂಟರ್ಪ್ರೈಸಸ್ ಎಂದು ನಕಲಿ ಬೋರ್ಡ್ ಹಾಕಿದ್ದಾನೆ.
ಮೇ 16 ರಂದೇ ಮಧ್ಯಾಹ್ನ 2.45ರ ಸುಮಾರಿಗೆ ಆಭರಣಗಳನ್ನು ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಮಲ್ಲೇಶ್ವರಂನ ಈ ಕಚೇರಿಗೆ ಬಂದಿದ್ದಾರೆ. ಅಂಗಡಿಯಲ್ಲಿದ್ದ ವ್ಯಕ್ತಿ ಪರೇಶ್ ಸೋನಿ ಎಂದು ಪರಿಚಯ ಮಾಡಿಕೊಂಡು ಇನ್ನಿಬ್ಬರು ಶ್ಯಾಮ್ ಮತ್ತು ಚಂದ್ರಶೇಖರ್ ರಾವ್ ಎಂದು ಪರಿಚಯಿಸಿಕೊಂಡಿದ್ದಾರೆ.
ನಂತರ ತೆಗೆದುಕೊಂಡು ಹೋಗಿದ್ದ ಆಭರಣಗಳನ್ನು ಟೇಬಲ್ನಲ್ಲಿಟ್ಟಾಗ ಕೆಲವು ಆಭರಣಗಳನ್ನು ಸೆಲೆಕ್ಟ್ ಮಾಡಿ ಶ್ಯಾಮ್ ಎಂಬಾತ ಎಷ್ಟು ಗ್ರಾಂ ಇದೆ ಎಂದು ಬರೆದುಕೊಂಡಿದ್ದಾನೆ. ಸಂಜೆ 4 ಗಂಟೆ ಸುಮಾರಿನಲ್ಲಿ ಸ್ವಲ್ಪ ಆಭರಣಗಳನ್ನು ವಾಪಸ್ ನೀಡಿ ಸೆಲೆಕ್ಟ್ ಮಾಡಿದ ಆಭರಣಗಳನ್ನು ಪಕ್ಕದ ಕ್ಯಾಬೀನ್ನಲ್ಲಿ ಕುಳಿತಿದ್ದ ಚಂದ್ರಶೇಖರ್ ರಾವ್ ಎಂಬುವರಿಗೆ ಆಭರಣಗಳನ್ನು ಲಿಸ್ಟ್ ಮಾಡಿ ಡಿಸೈನ್ಗಳ ಫೋಟೋ ತೆಗೆದುಕೊಳ್ಳುವಂತೆ ಪರೇಶ್ ಸೋನಿ ಹೇಳಿದಂತೆ ನಟಿಸಿ ಆಭರಣಗಳೊಂದಿಗೆ ಇಬ್ಬರೂ ಪರಾರಿಯಾಗಿದ್ದಾರೆ.
ಇತ್ತ ಫೊಟೋ ತೆಗೆಯುವ ನೆಪದಲ್ಲಿ ಒಳಗೆ ಇದ್ದ ಚಂದ್ರಶೇಖರ್ ರಾವ್ ಹೊರಗೆ ಬರಲೇ ಇಲ್ಲ. ಈತನನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದ ಶ್ಯಾಮ್ ಸಹ ಪರಾರಿಯಾಗಿದ್ದಾನೆ. ಕೆಲ ಸಮಯದ ಬಳಿಕ ಹೊರಗೆ ಕುಳಿತಿದ್ದ ಸೇಲ್್ಸ ಮ್ಯಾನೇಜರ್ ಒಳಗೆ ನೋಡಿದಾಗ ಯಾರೂ ಇರಲಿಲ್ಲ. ಆಭರಣವೂ ಇರಲಿಲ್ಲ. ತಾವು ಮೋಸ ಹೋಗಿರುವುದು ಅರಿತು ತಕ್ಷಣ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಮಾಲೀಕರು ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾರೀ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳು, ಅಂಗಡಿಗಳಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಇಂಚಿಂಚು ಪರಿಶೀಲಿಸುತ್ತಿರುವ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.
