ಬೆಂಗಳೂರು,ಫೆ.23- ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಬುಲೇರೋ ವಾಹನ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಮೃತಪಟ್ಟವರನ್ನು ಕೆಆರ್ ಪುರ ನಿವಾಸಿಗಳಾದ ನಿತಿನ್ (21) ಮತ್ತು ಪುನೀತ್ (25) ಎಂದು ಗುರುತಿಸಲಾಗಿದೆ.
ನಿತಿನ್ ಸ್ಕೂಟರ್ನಲ್ಲಿ ಪುನೀತ್ನನ್ನು ಕರೆದುಕೊಂಡು ಇಂದು ಬೆಳಗಿನ ಜಾವ 1.30 ರ ಸುಮಾರಿನಲ್ಲಿ ಹೊಸಕೋಟೆ ಕಡೆಯಿಂದ ಕೆಆರ್ ಪುರದ ಕಡೆಗೆ ಹಳೆ ಮದ್ರಾಸ್ ರಸ್ತೆಯ ಬೂದಿಗೆರೆ ಬ್ರಿಡ್ಜ್ ಮೇಲೆ ಹೋಗುತ್ತಿದ್ದರು. ಅದೇ ಸಮಯದಲ್ಲಿ ಅತೀ ವೇಗವಾಗಿ ಬಂದ ಬುಲೇರೋ ವಾಹನ ಇವರ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡರು.
ಸ್ಕೂಟರ್ ಚಾಲನೆ ಮಾಡುತ್ತಿದ್ದ ನಿತಿನ್ನನ್ನು ಆವಲಹಳ್ಳಿಯ ರೇವಂಕರ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮುಂಜಾನೆ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ.
ಹಿಂಬದಿ ಸವಾರ ಪುನೀತ್ನನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಸಹ ಬೆಳಗಿನ ಜಾವ 3.30ರ ಸುಮಾರಿಗೆ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಕೆಆರ್ ಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬುಲೇರೋ ವಾಹನ ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಭೀಕರ ಅಪಘಾತಕ್ಕೆ ಬುಲೇರೋ ವಾಹನದ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
