ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್ಬಾಗ್ ಮತ್ತೊಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈಗಾಗಲೇ ನಾಲ್ಕು ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿರುವ ತೋಟಗಾರಿಕಾ ಇಲಾಖೆ, ಇದೀಗ ಕ್ಯಾಂಟೀನ್ ಸಮೀಪ ಮತ್ತೊಂದು ಹೊಸ ಗೇಟ್ ನಿರ್ಮಿಸುವ ಚಿಂತನೆ ನಡೆಸಿದೆ. ಈ ನಿರ್ಧಾರಕ್ಕೆ ವಾಯುವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಲಾಲ್ ಬಾಗ್ ಪ್ರವೇಶಕ್ಕೆ ಈಗ ನಾಲ್ಕು ಪ್ರಮುಖ ಗೇಟ್ಗಳಿದ್ದು, ಬೆಳಿಗ್ಗೆ-ಸಂಜೆ ಸಾವಿರಾರು ಮಂದಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಪ್ರಕೃತಿ ಪ್ರಿಯರು ಇದೇ ದ್ವಾರಗಳ ಮೂಲಕ ಓಡಾಡುತ್ತಾರೆ.
ಉದ್ಯಾನವನದ ಆವರಣದಲ್ಲಿ ತೋಟಗಾರಿಕಾ ಇಲಾಖೆಯ ಹಲವು ಕಚೇರಿಗಳೂ ಕಾರ್ಯ ನಿರ್ವಹಿಸುತ್ತಿವೆ. ಆಡಳಿತಾತಕ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಕಚೇರಿ ವ್ಯವಹಾರಗಳಿಗೆ ಅನುಕೂಲವಾಗುವಂತೆ ಹೊಸ ಗೇಟ್ ಅಗತ್ಯವಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಚೇರಿಗಳಿಗೆ ನೇರ ಪ್ರವೇಶ, ವಾಹನಗಳ ಸುಗಮ ಸಂಚಾರ ಹಾಗೂ ಆಡಳಿತ ಕಾರ್ಯಗಳಿಗೆ ನೆರವಾಗಲಿದೆ. ಈ ಹಿನ್ನೆಲೆ ಹೊಸ ಗೇಟ್ ನಿರ್ಮಾಣಕ್ಕೆ ಸಿದ್ದತೆ ಎಂದು ಎಂಬುದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆದರೆ ವಾಯುವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳು, ಈಗಿರುವ ಗೇಟ್ಗಳೇ ಸಾಕು. ಹೊಸ ದ್ವಾರ ನಿರ್ಮಾಣದಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಉದ್ಯಾನವನದ ಪರಿಸರ ಸಮತೋಲನಕ್ಕೆ ಧಕ್ಕೆಯಾಗಬಹುದು ಎಂದು ಹೇಳುತ್ತಿದ್ದಾರೆ.
ಲಾಲ್ ಬಾಗ್ ಕೇವಲ ಉದ್ಯಾನವಲ್ಲ, ನಗರದ ಉಸಿರುಗಾವಲು. ಹೀಗಾಗಿ ಯಾವುದೇ ಹೊಸ ನಿರ್ಮಾಣ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರ್ಲಕ್ಷಿಸಬಾರದು ಎಂದು ಪರಿಸರ ಸಂಘಟನೆಗಳು ಎಚ್ಚರಿಕೆ ನೀಡಿವೆ.ಆದರೆ ತೋಟಗಾರಿಕಾ ಇಲಾಖೆ ಪರಿಸರ ಪ್ರೇಮಿಗಳು ಹಾಗೂ ವಾಯುವಿಹಾರಿಗಳ ಅಭಿಪ್ರಾಯವನ್ನು ಪರಿಗಣಿಸುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ…!
