ಬೆಂಗಳೂರು,ಫೆ.20- ಪ್ರಿಯಕರನ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 3.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಪ್ರಮೀಳಾ(35) ಬಂಧಿತ ಆರೋಪಿ.
ಬೊಮನಹಳ್ಳಿಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಧಾಕರ್ಎಂಬಾತನ ಪರಿಚಯವಾಗಿ ಸಲುಗೆ ಬೆಳೆದಿತ್ತು. ಬಳಿಕ ಆಕೆ ಅಲ್ಲಿ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಮನೆ ಕೆಲಸ ಮಾಡುತ್ತಿದ್ದಳು.ಸುಧಾಕರ್ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದು ಈಕೆಯೊಂದಿಗೂ ಸಂಬಂಧ ಹೊಂದಿದ್ದ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಮೀಳಾಗೆ ಸುಧಾಕರ್ ಸಾಲ ತೀರಿಸಲು 20 ಸಾವಿರ ಹಣ ಕೇಳಿದ್ದ. ಆಗ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಾಟ ಮಾಡಿ ಪ್ರಿಯಕರನಿಗೆ ಹಣ ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳ್ಳತನದ ವಿಷಯ ಗೊತ್ತಾಗಿತ್ತು. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮನೆ ಕೆಲಸದಾಕೆಯ ವಿಚಾರಣೆ ನಡೆಸಿದ್ದರು. ಈ ವೇಳೆ ತನಗೇನೂ ಗೊತ್ತೇ ಇಲ್ಲ ಎಂಬಂತೆ ಪ್ರಮೀಳಾ ನಾಟಕವಾಡಿದ್ದಳು. ನಂತರ ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಳು.
ವಿಚಾರಣೆ ವೇಳೆ ಕದ್ದಿದ್ದ ಚಿನ್ನಾಭರಣವನ್ನು ಬೊಮನಹಳ್ಳಿಯ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಪೊಲೀಸರುಒಟ್ಟು 35 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪರಾರಿಯಾಗಿದ್ದ ಪ್ರಮೀಳಾಳ ಪ್ರಿಯಕರ ಸುಧಾಕರ್ನನ್ನು ವಶಕ್ಕೆ ಪಡೆಯಲಾಗಿದೆ.
