ಗದಗ,ಫೆ.25- ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯನ್ನು ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ ಎಂದು ಇಂದು ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದಲ್ಲಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಇಬ್ಬರು ಆಪ್ತ ಸಹಾಯಕರನ್ನು ಬಂಧಿಸಿದ್ದರು.
ನಂತರ ಇದರ ಹಿಂದೆ ಸ್ವಾಮೀಜಿಯೊಬ್ಬರ ಕೈವಾಡವಿದ್ದು, ಇದಕ್ಕೆ ಕಾಂಗ್ರೆಸ್ನವರು ಕುಮಕ್ಕು ನೀಡಿದ್ದಾರೆ. ಇದರ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ಸ್ಥಳೀಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ಲಂಬಾಣಿ ಸಮುದಾಯದ ನಾಯಕರನ್ನು ಷಡ್ಯಂತ್ರ ರೂಪಿಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಕಳಂಕ ತಂದು ಸೋಲಿಸಬೇಕೆಂಬ ಮಾತುಗಳು ಸ್ವಾಮೀಜಿಯವರ ಬಾಯಿಂದ ಬಂದಿದೆ ಎಂದು ಕೆಲ ಸಂಘಟನೆಯ ನಾಯಕರು ಕಿಡಿಕಾರಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
