ತುಮಕೂರು,ಫೆ.10- ಹಿಟಾಚಿ ಯಂತ್ರ ಖರೀದಿ ಮಾಡಿದ ಕೆಲವೇ ತಿಂಗಳುಗಳಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಗ್ರಾಹಕನೊಬ್ಬ ಶೋರೂಂನ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಬೀಗ ಜಡಿದಿರುವ ಘಟನೆ ಅಂತರಸನಹಳ್ಳಿ ಸಮೀಪದ ಹಿಟಾಚಿ ಶೋರೂಂನಲ್ಲಿ ನಡೆದಿದೆ.
ಗುಬ್ಬಿ ಮೂಲದ ಗಿರೀಶ್ ಎಂಬುವರು ಕಳೆದ 5 ತಿಂಗಳ ಹಿಂದೆ ಸುಮಾರು 52 ಲಕ್ಷ ರೂ. ನೀಡಿ ನೂತನ ಹಿಟಾಚಿ ಯಂತ್ರ ಖರೀದಿಸಿದ್ದರು. 7 ಲಕ್ಷ ಡೌನ್ಪೇಮೆಂಟ್ ನೀಡಿ ಪ್ರತೀ ತಿಂಗಳು 1.15 ಲಕ್ಷ ಇಎಂಐ ಕೂಡ ಕಟ್ಟುತ್ತಿದ್ದರು.
ಆದರೆ ಯಂತ್ರ ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ತಾಂತ್ರಿಕ ದೋಷ ಕಂಡುಬಂದು ಕೆಲಸ ಮಾಡದೇ ಕೆಟ್ಟು ನಿಂತಿದೆ ಎಂದು ಗಿರೀಶ್ ಆರೋಪಿಸಿದ್ದಾರೆ.ಹಿಟಾಚಿಯಲ್ಲಿ ಕಂಡುಬಂದ ಸಮಸ್ಯೆ ಕುರಿತು ಹಲವು ಬಾರಿ ಶೋರೂಂ ಹಾಗೂ ಕಂಪನಿಯವರನ್ನು ಸಂಪರ್ಕಿಸಿದರೂ ಸಹ ಯಾವುದೇ ಸ್ಪಂದನೆ ಸಿಗಲಿಲ್ಲ.
ಎರಡು ತಿಂಗಳುಗಳಿಂದ ನಿರಂತರವಾಗಿ ಅಲೆದಾಡಿದರೂ ಹಿಟಾಚಿ ರಿಪೇರಿಯಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಮಸ್ಯೆ ಪರಿಹಾರಕ್ಕೆ ಶೋರೂಂಗೆ ಭೇಟಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಹಕ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಲ್ಲದೆ ಬಾಗಿಲಿಗೆ ಅಡ್ಡಲಾಗಿ ಹಿಟಾಚಿಯನ್ನು ನಿಲ್ಲಿಸಿದ್ದಾನೆ.
ಯಂತ್ರವನ್ನು ಸರಿಪಡಿಸಿಕೊಡಬೇಕು. ಇಲ್ಲವಾದರೆ ಕಟ್ಟಿದ ಹಣವನ್ನು ವಾಪಸ್ ನೀಡಿ, ಸಾಲಸೋಲ ಮಾಡಿ ಯಂತ್ರ ಖರೀದಿಸಿದ್ದು, ಈ ರೀತಿ ಸಮಸ್ಯೆಯಾದರೆ ನಮ ಗತಿ ಏನು?, ಖರೀದಿ ಮಾಡುವಾಗ ಬೆಣ್ಣೆಯಂತೆ ಮಾತನಾಡುತ್ತಾರೆ. ನಂತರ ಯಾವುದೇ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ್ದಾರೆ.
