ಹನೂರು,ಮೇ 12- ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ ಪೋಷಕರೊಂದಿಗೆ ತೆರಳುತ್ತಿದ್ದ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಪಣ ತೊಟ್ಟಿದ್ದಾರೆ.
ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕನನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಹಿಡಿಯುವಂತೆ ಭಕ್ತರು ಒತ್ತಾಯಿಸಿದ್ದು, ಅರಣ್ಯಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದು ನರಹಂತಕ ಚಿರತೆ ಸೆರೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದು, ಥರ್ಮಲ್ ಡ್ರೋನ್ ಟೀಂ ಬೆಟ್ಟದಲ್ಲೇ ಬೀಡುಬಿಟ್ಟಿದೆ.
ಬೆಟ್ಟದಲ್ಲಿ ನಾಲ್ಕು ಬೋನುಗಳನ್ನಿಡಲಾಗಿದೆ. ಚಿರತೆ ಸೆರೆಗಾಗಿ ವಿಶೇಷ ಕಾರ್ಯಪಡೆ ತಂಡ ರಚಿಸಿದ್ದು, ಮಲೈ ಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮದ ಸಿಬ್ಬಂದಿಗಳು ಈ ಚಿರತೆ ಕೂಂಬಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಟ್ಟದಲ್ಲೇ ಸಂಚರಿಸುತ್ತಾ ಥರ್ಮಲ್ ಡ್ರೋನ್ ಮೂಲಕ ಚಿರತೆ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ.ಬೃಹತ್ ಅರಣ್ಯ ಪ್ರದೇಶವಾದುದರಿಂದ ಚಿರತೆ ಸೆರೆ ಅಷ್ಟು ಸುಲಭವಾಗಿಲ್ಲ. ಈ ಪ್ರಯತ್ನ ವಿಫಲವಾದರೆ ಬೇರೆ ಯಾವ ಮಾರ್ಗ ಅನುಸರಿಸಬೇಕೆಂಬುದರ ಬಗ್ಗೆ ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
