ತುಮಕೂರು,ಮಾ.26- ಕುರಿ ಶೆಡ್ಗೆ ನುಗ್ಗಿದ ಚಿರತೆ 21 ಕುರಿಗಳನ್ನು ಸಾಯಿಸಿರುವ ಘಟನೆ ತಾಲ್ಲೂಕಿನ ದುರ್ಗದಹಳ್ಳಿ ಸಮೀಪದ ಶೇಟುಪಾಳ್ಯದಲ್ಲಿ ನಡೆದಿದೆ.ರೈತ ಹೇಮಂತ್ ಅವರಿಗೆ ಸೇರಿದ ತೋಟದ ಮನೆ ಸಮೀಪದ ಕುರಿಶೆಡ್ಗೆ ನುಗ್ಗಿದ ಚಿರತೆ ಶೆಡ್ನಲ್ಲಿದ್ದ ಕುರಿಗಳ ಮೇಲೆ ಎರಗಿದೆ. 33 ಕುರಿಗಳ ಪೈಕಿ ಸ್ಥಳದಲ್ಲಿ 19 ಕುರಿಗಳ ರಕ್ತಹೀರಿ ಸಾಯಿಸಿದ ಚಿರತೆ ಎರಡು ಕುರಿಮರಿಗಳನ್ನು ಹೊತ್ತೊಯ್ದಿದೆ. ಪ್ರತಿ ಕುರಿಗಳು 10 ರಿಂದ 15 ಸಾವಿರ ಬೆಲೆ ಬಾಳುತ್ತಿದ್ದು, 2 ಲಕ್ಷದಷ್ಟು ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದ ಆರ್ಎಫ್ಓ ನಮಿತಾ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿ ಊರ್ಡಿಗೆರೆ ಪಶು ವೈದ್ಯಾಧಿಕಾರಿಗಳಿಂದ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆ ಮಾನದಂಡದ ಪ್ರಕಾರ ಪ್ರತೀ ಕುರಿ ಸಾವಿಗೆ 4 ಸಾವಿರ ರೂ. ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಆರ್ಎಫ್ಓ ನಮಿತಾ ಅವರು ಘಟನಾ ಸ್ಥಳದಲ್ಲಿ ಚಿರತೆ ಸೆರೆಹಿಡಿಯಲು ಬೋನ್ ಇರಿಸಲಾಗಿದ್ದು, ಇಬ್ಬರು ಅರಣ್ಯ ರಕ್ಷಕರ ಗಸ್ತು ಸಹ ಹಾಕಲಾಗಿದೆ. ಇಲಾಖಾ ಮಾನದಂಡದಂತೆ ಪರಿಹಾರ ಮಂಜೂರು ಮಾಡಲಾಗುವುದು ಎಂದರು.
ದೇವರಾಯನದುರ್ಗ ಅರಣ್ಯ ಪ್ರದೇಶದ ಸಮೀಪದಲ್ಲೇ ದುರ್ಗದಹಳ್ಳಿಯ ಶೇಟುಪಾಳ್ಯವಿದ್ದು, ಇತ್ತೀಚೆಗೆ ಚಿರತೆ, ಕರಡಿ ಹಾವಳಿ ಹೆಚ್ಚಾಗಿದ್ದು, ರೈತರು ಪ್ರಾಣಾಪಾಯದ ಬದುಕುವಂತಾಗಿದೆ. ಇದರಿಂದ ಕೃಷಿ ಕಾರ್ಯ ಹಾಗೂ ಕುರಿ ಜಾನುವಾರು ಸಾಕಾಣೆಗೆ ತೊಡಕಾಗಿದೆ. ಅರಣ್ಯ ಇಲಾಖೆಯವರು ಶೇಟುಪಾಳ್ಯದ ನಿವಾಸಿಗಳಿಗೆ ರೈತರಿಗೆ ವನ್ಯಮೃಗಗಳ ಕಾಟದಿಂದ ಮುಕ್ತಿ ಕೊಡಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
