Monday, May 13, 2024
Homeರಾಷ್ಟ್ರೀಯಜನರಿಗೆ ರಕ್ಷಣೆ ಕೊಡಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ : ಸಿದ್ದು ಸರ್ಕಾರದ ವಿರುದ್ಧ ಮೋದಿ ಘರ್ಜನೆ

ಜನರಿಗೆ ರಕ್ಷಣೆ ಕೊಡಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ : ಸಿದ್ದು ಸರ್ಕಾರದ ವಿರುದ್ಧ ಮೋದಿ ಘರ್ಜನೆ

ಬೆಂಗಳೂರು,ಏ.28- ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ರಾಜ್ಯದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಜನರಿಗೆ ರಕ್ಷಣೆ ಕೊಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ಅಧಿಕಾರದಿಂದ ಬಿಟ್ಟು ತೊಲಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತರೂಢ ಕಾಂಗ್ರೆಸ್‌ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಯ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ತಾಯಿ ಭುವನೇಶ್ವರಿ ಮತ್ತು ಸವದತ್ತಿ ಯಲ್ಲಮ್ಮಾಗೆ ಪ್ರಣಾಮ ಸಲ್ಲಿಸುತ್ತೇನೆ. ಕರ್ನಾಟಕದ ಎಲ್ಲ ಮತದಾರರಿಗೆ ಅಭಿನಂದನೆಗಳು.

ನಾನು ಕರ್ನಾಟಕದಲ್ಲಿ ಹೋದಲ್ಲೆಲ್ಲ ಮತ್ತೊಮ್ಮೆ ಮೋದಿ ಸರಕಾರ ಬರಬೇಕೆಂದು ಬಯಸುತ್ತಿದ್ದಾರೆ. ನಾವು ಛತ್ರಪತಿ ಶಿವಾಜಿ, ಭಗವಾನ್‌ ಬಸವೇಶ್ವರ ಅವರ ಅನುಯಾಯಿಗಳು. ಶಿವಾಜಿಯವರು ಪ್ರಜೆಗಳಿಗಾಗಿ ಸಂಘರ್ಷ ಮಾಡಿದವರು, ಬಸವೇಶ್ವರರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮಹತ್ವ ಸಾರಿದವರು. ಭಾರತ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಹೇಳಿದರು.

ತಮ್ಮ 30 ನಿಮಿಷಗಳ ಭಾಷಣದಲ್ಲಿ ಮೋದಿ ಅವರು, ಇತ್ತೀಚಿಗೆ ಕರ್ನಾಟದಲ್ಲಿ ಸಂಭವಿಸಿದ ಕೆಲವು ಘಟನೆಗಳನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ನಿಂದ ತುಷ್ಠೀಕರಣ ರಾಜಕಾರಣ ನಡೆಯುತ್ತಿದೆ. ಕೋಮುಗಲಭೆ, ಬಾಂಬ್‌ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಬೆಳಗಾವಿಯಲ್ಲಿ ಮಹಿಳೆಯ ಮೇಲೆ ದಾಳಿ, ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆ,. ಹುಬ್ಬಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಹತ್ಯೆಯಿಂದ ದೇಶದಲ್ಲೇ ಆತಂಕ ಮೂಡಿದೆ.

ಕಾಂಗ್ರೆಸ್‌ ಸರಕಾರವು ತುಷ್ಠೀಕರಣದ ಕಡೆ ಗಮನ ಕೊಡುತ್ತಿದೆ. ವಿದ್ಯಾರ್ಥಿನಿ ನೇಹಾರ ಕುರಿತು ಕಾಂಗ್ರೆಸ್ಸಿಗರಿಗೆ ಕಳಕಳಿ ಇಲ್ಲ. ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. ಕಾಂಗ್ರೆಸ್‌ ಪಕ್ಷವು ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಲಿ ಎಂದು ಹೇಳಿದರು.

ಕಾಂಗ್ರೆಸ್‌ ಹೇಳಿದೆ ಅಧಿ ಕಾರಕ್ಕೆ ಬಂದರೆ, ಎಕ್ಸರೇ ಮಾಡುತ್ತೇವೆಂದು ಹೇಳುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಇರುವ ಚಿನ್ನ, ಮಂಗಳ ಸೂತ್ರ, ನಿಮ್ಮ ಸಂಪತ್ತು, ಎಲ್ಲವನ್ನೂ ದೋಚಿ ಅದನ್ನು ಹಂಚಿಕೆ ಮಾಡುತ್ತದೆ. ನಿಮ್ಮ ಸಂಪತ್ತು ಲೂಟಿ ಆಗಬೇಕಾ? ನಿಮ್ಮ ಮಂಗಳ ಸೂತ್ರ ಇನ್ನೊಬ್ಬರ ಕೈಗೆ ಇಡ್ತೀರಾ? ನಿಮ್ಮ ಚಿನ್ನವನ್ನು ಕೊಡ್ತೀರಾ? ನಾನು ನಿಮಗೆ ಭರವಸೆ ನೀಡುತ್ತೇನೆ. ಮೋದಿ ಇರುವ ತನಕ ಅದು ಸಾಧ್ಯವಿಲ್ಲ ಎಂದು ತಮ್ಮ ವಿರೋಧಿ ಗಳಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಅಧಿ ಕಾರಕ್ಕೆ ಬಂತೆಂದರೆ ನೀವು ನಿಮ್ಮ ಮಕ್ಕಳಿಗೆ ಕಷ್ಟ ಪಟ್ಟು ಕೂಡಿ ಇಟ್ಟದನ್ನು ಲೂಟಿ ಮಾಡುತ್ತದೆ. ಅದನ್ನು ನಿಮ್ಮ ಮಕ್ಕಳಿಗೆ ನೀಡೋದಿಲ್ಲ. ಶೇ. 55 ಅದಕ್ಕೆ ಟ್ಯಾಕ್‌್ಸ ಮೂಲಕ ಸರ್ಕಾರ ಪಡೆಯುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ನಿಮ್ಮ ವೋಟ್‌ ಬ್ಯಾಂಕ್‌ ಗಾಗಿ ಕಾಂಗ್ರೆಸ್‌ ಏನು ಬೇಕಾದರೂ ಮಾಡುತ್ತದೆ ಕಾಂಗ್ರೆಸ್‌ಗೆ ಪಾಠ ಕಲಿಸಬೇಕೊ? ಬೇಡವೊ? ನಿಮ್ಮ ಕನಸು ನನ್ನ ಸಂಕಲ್ಪ. ನಾನು ಪ್ರತಿ ಕ್ಷಣ ಭಾರತಕ್ಕಾಗಿ ಮಿಡಿಯುವೆ. 24×7 ದುಡಿದು – 2047ರ ತನಕ ವಿಕಸಿತ ಭಾರವನ್ನಾಗಿ ಮಾರ್ಪಡಿಸುವೆ ಎಂದು ಮೋದಿ ಹೇಳಿದರು.

ರಾಜ, ಮಹಾರಾಜರ ಜಮೀನು ಕಸಿದುಕೊಂಡರು. ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ಗಾಗಿ ಏನುಬೇಕಾದರೂ ಮಾಡುತ್ತದೆ. ಇಲ್ಲಿ ಅಭಿವೃದ್ಧಿ ಬಂದ್‌ ಆಗಿದೆ. ರಸ್ತೆ, ನೀರು, ಬರ, ಉದ್ಯೋಗ ಸಮಸ್ಯೆಗಳು ರಾಜ್ಯದಲ್ಲಿ ತಾಂಡವವಾಡುತ್ತಿವೆ. ಕಳೆದ 10 ವರ್ಷದಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಹಾಗಾಗಿ ಜನರ ವಿಶ್ವಾಸ ವೃದ್ಧಿಯಾಗಿದೆ. ಬಡವರ ಕಲ್ಯಾಣಕ್ಕಾಗಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಬೇಕು. ಭಾರತ ಇನ್ನಷ್ಟು ಬಲಾಢ್ಯವಾಗಲಿದೆ, ಭಾರತೀಯರು ಖುಷಿಯಾಗುತ್ತಾರೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ಸಿಗೆ ಔರಂಗಜೇಬನ ಅತ್ಯಾಚಾರ, ಮಂದಿರಗಳ ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ದೇಗುಲಗಳನ್ನು ಅವಮಾನ ಮಾಡುವವರ ಜೊತೆ ಕಾಂಗ್ರೆಸ್‌ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಭಾರತದ ವಿಭಜನೆಯಲ್ಲಿ ದೊಡ್ಡ ಪಾತ್ರ ವಹಿಸಿದವರನ್ನು ಕಾಂಗ್ರೆಸ್‌ ಪಕ್ಷ ಬೆಂಬಲಿಸುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ಸಿನ ತುಷ್ಠೀಕರಣ ನೀತಿ ಅವರ ಪ್ರಣಾಳಿಕೆಯಲ್ಲೂ ವಿವರವಾಗಿ ಹೊರಬಂದಿದೆ ಎಂದರು.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಹೊಸ ನೀತಿ ತರಲು ಕಾಂಗ್ರೆಸ್‌ ಮುಂದಾಗಿದೆ. ಮಕ್ಕಳಿಗಾಗಿ ಶೇಖರಿಸಿಟ್ಟ ಹಣ, ಆಸ್ತಿಯನ್ನು ನೀವು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ 55ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್‌ ಕೇಳಲಿದೆ. ಅದನ್ನು ಮತಬ್ಯಾಂಕಿಗೆ ಹಂಚಲು ನಿಮ್ಮ ಸಂಪತ್ತಿನ ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನು ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ ಎಂದು ತಿಳಿಸಿದರು.

ಇಂಥ ಚಿಂತನೆಗಳನ್ನು ಹೊಂದಿದ ಕಾಂಗ್ರೆಸ್ಸಿಗರಿಗೆ ಪಾಠ ಕಲಿಸಿ ಎಂದು ತಿಳಿಸಿದರು. ಸೇನೆಯಲ್ಲಿ ಯುವತಿಯರಿಗೆ ಅವಕಾಶ ಕೊಡಲಾಗುತ್ತಿದೆ. ಸಿಆರ್‌ಪಿಎಫ್‌ನಲ್ಲೂ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಿದೆ. ಜನರ ಕನಸೇ ಬಿಜೆಪಿ ಸಂಕಲ್ಪ ಎಂದು ಅವರು ನುಡಿದರು. ದೇಶಕ್ಕಾಗಿ ಸದಾ 24×7 ಗಂಟೆ ಕಾಲ ದುಡಿದು 2047ರ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದರು.

ಕರ್ನಾಟಕದ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ಜಗದೀಶ್‌ ಶೆಟ್ಟರ್‌, ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗರಿಷ್ಠ ಮತದಿಂದ ಚುನಾಯಿಸಿ. ಕಮಲದ ಚಿಹ್ನೆಗೆ ನೀಡಿದ ಮತವು ಮೋದಿಯವರಿಗೆ ಹೋಗಲಿದೆ. ಮೋದಿಯವರನ್ನು ಸಶಕ್ತಗೊಳಿಸಲು ಬಿಜೆಪಿಗೆ ಮತದಾನ ಮಾಡಿ ಎಂದು ವಿನಂತಿಸಿದರು. ಪ್ರತಿ ಬೂತ್ನಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯ ಸರಕಾರವು ಸಂಪೂರ್ಣ ದಿವಾಳಿಯಾಗಿದೆ ಎಂದು ಟೀಕಿಸಿದರು. ಜಗದೀಶ್‌ ಶೆಟ್ಟರ್‌, ಅಣ್ಣಾಸಾಬೇಬ್‌ ಜೊಲ್ಲೆ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸುತ್ತೇವೆ. ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಅಭ್ಯರ್ಥಿಗಳಾದ ಜಗದೀಶ್‌ ಶೆಟ್ಟರ್‌ (ಬೆಳಗಾವಿ), ಅಣ್ಣಾಸಾಬೇಬ್‌ ಜೊಲ್ಲೆ (ಚಿಕ್ಕೋಡಿ), ಸಂಸದರಾದ ಮಂಗಳಾ ಅಂಗಡಿ, ಪ್ರಮುಖರಾದ ಡಾ.ಪ್ರಭಾಕರ ಕೋರೆ, ಈರಣ್ಣ ಕಡಾಡಿ, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿ ಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು.

ಇದೇ ವೇಳೆ ಸಮಾವೇಶದಲ್ಲಿ ಮೋದಿ ಅವರಿಗೆ ಅವರ ತಾಯಿಯ ಫೋಟೋ ಇರುವ ಫ್ರೇಮ್‌ ಒಂದನ್ನು ಗಿಫ್‌್ಟ ಆಗಿ ನೀಡಲಾಯ್ತು. ಈ ವೇಳೆ ಮೋದಿ ತಾಯಿ ಫೋಟೋ ನೋಡುತ್ತಿದ್ದಂತೆಯೇ ಕೊಂಚ ಭಾವುಕರಾದರು.

RELATED ARTICLES

Latest News