ನವದೆಹಲಿ,ಜು.24- ದೆಹಲಿಯ ಜಂತರ್ ಮಂತರ್ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯು ತನ್ನ ಮೂಲ ಉದ್ದೇಶದಿಂದ ದೂರ ಸರಿದು ರಾಜಕೀಯ ಮತ್ತು ಧಾರ್ಮಿಕ ಬಣ್ಣ ಪಡೆದುಕೊಳ್ಳುತ್ತಿದೆ ಎಂಬ ತೀವ್ರ ಅಸಮಾಧಾನ ವಿದ್ಯಾರ್ಥಿ ಸಮುದಾಯದಿಂದಲೇ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳ ಹಕ್ಕು ಮತ್ತು ನ್ಯಾಯಕ್ಕಾಗಿ ನಡೆಯಬೇಕಿದ್ದ ಹೋರಾಟವು ಬೇರೆಡೆಗೆ ತಿರುಗುತ್ತಿರುವುದು, ಪ್ರಾಮಾಣಿಕವಾಗಿ ಕಷ್ಟಪಟ್ಟು ಪರೀಕ್ಷೆ ಬರೆದ ನಿಜವಾದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಶೆ ಹಾಗೂ ಆತಂಕವನ್ನು ಮೂಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನ್ಯಾಯ ಕೇಳಲು ಪ್ರಾರಂಭವಾದ ಈ ಹೋರಾಟವು, ಪ್ರಸ್ತುತ ವಿವಿಧ ರಾಜಕೀಯ ಹಿತಾಸಕ್ತಿಗಳು ಮತ್ತು ಧಾರ್ಮಿಕ ಅಜೆಂಡಾಗಳ ಕೈಗೆ ಸಿಲುಕಿ ನೈಜ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಬಲಿ ನೀಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವೈದ್ಯಕೀಯ ಶಿಕ್ಷಣದ ಭವಿಷ್ಯ, ಪರೀಕ್ಷೆಯ ಪಾರದರ್ಶಕತೆ ಮತ್ತು ಮರುಪರೀಕ್ಷೆಯ ಬಗ್ಗೆ ಚರ್ಚೆಯಾಗಬೇಕಿದ್ದ ವೇದಿಕೆಯಲ್ಲಿ ಅನ್ಯ ವಿಚಾರಗಳು ಪ್ರಸ್ತಾಪವಾಗುತ್ತಿವೆ.
ವಿದ್ಯಾರ್ಥಿಗಳ ಬೇಸರ:
ನಾವು ಹಗಲು-ರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇವೆ. ನಮಗೆ ನ್ಯಾಯ ಸಿಗಬೇಕಿದೆ. ಆದರೆ ಇಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಧಾರ್ಮಿಕ ಗದ್ದಲಗಳಿಂದಾಗಿ ನಮ ನಿಜವಾದ ಧ್ವನಿ ಸರ್ಕಾರಕ್ಕೆ ತಲುಪುತ್ತಿಲ್ಲ, ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ನೈಜ ಆಕಾಂಕ್ಷಿಗಳು.
ಆರಂಭದಲ್ಲಿ ಇದು ಸಂಪೂರ್ಣವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಗೆ ಸಂಬಂಧಿಸಿದ ಹೋರಾಟವಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಜಂತರ್ ಮಂತರ್ನಲ್ಲಿ ಕಂಡುಬರುತ್ತಿರುವ ಬೆಳವಣಿಗೆಗಳು, ಧರಣಿ ಸತ್ಯಾಗ್ರಹಗಳು ವಿದ್ಯಾರ್ಥಿ ಹೋರಾಟಕ್ಕಿಂತ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿ ಪರಿಣಮಿಸಿತ್ತು.
ಹೋರಾಟಕ್ಕೆ ಧಾರ್ಮಿಕ ಬಣ್ಣ ಮತ್ತು ಭಾರತ ವಿರೋಧಿ ಕೂಗು ಕಳೆದ ಕೆಲವು ದಿನಗಳಿಂದ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ, ಪರೀಕ್ಷೆಯ ಅಕ್ರಮಗಳ ಚರ್ಚೆಗಿಂತ ಹೆಚ್ಚಾಗಿ ರಾಜಕೀಯ ಹಾಗೂ ಧಾರ್ಮಿಕ ಬಣ್ಣ ಬಳಿಯುವ ಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಪ್ರತಿಭಟನಾ ಸ್ಥಳದಲ್ಲಿ ದೇಶವಿರೋಧಿ ಘೋಷಣೆಗಳು ಹಾಗೂ ಪರೀಕ್ಷೆಗೆ ಸಂಬಂಧವಿಲ್ಲದ ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವುದು ಪ್ರತಿಭಟನೆಯ ತೀವ್ರತೆಯನ್ನು ಕುಗ್ಗಿಸುತ್ತಿರುವುದು ಗಮನಾರ್ಹ ಸಂಗತಿ.
ಈ ಹಿಂದೆ ನಡೆದ ಹಲವು ಜನಪರ ಹೋರಾಟಗಳಲ್ಲೂ (ಉದಾಹರಣೆಗೆ ರೈತರ ಕಾಯ್ದೆ ವಿರುದ್ಧದ ಹೋರಾಟ ಹಾಗೂ ಶಹೀನ್ ಬಾಗ್ ಪ್ರತಿಭಟನೆ) ಅಂತಿಮ ಹಂತದಲ್ಲಿ ಮೂಲ ವಿಷಯ ಬದಿಗೊತ್ತಿ, ಇತರ ಹಿತಾಸಕ್ತಿಗಳು ಪ್ರವೇಶಿಸಿ ಚಳವಳಿಯ ಹಾದಿ ತಪ್ಪಿಸಿದ ಉದಾಹರಣೆಗಳಿವೆ. ಅದೇ ಮಾದರಿ ಈಗ ಜಂತರ್ ಮಂತರ್ನಲ್ಲಿ ಮರುಕಳಿಸುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಪರೀಕ್ಷೆ ಬರೆಯದವರ ಪ್ರವೇಶ:
ವಿದ್ಯಾರ್ಥಿಗಳ ಆಕ್ರೋಶ ಈ ಹೋರಾಟದಲ್ಲಿ ನೀಟ್ ಪರೀಕ್ಷೆಗೆ ಯಾವುದೇ ಸಂಬಂಧವಿಲ್ಲದ, ಪರೀಕ್ಷೆ ಬರೆಯದೇ ಇಲ್ಲದ ಹೊರಗಿನ ವ್ಯಕ್ತಿಗಳು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡುಬಂದಿದೆ.
ವಿದ್ಯಾರ್ಥಿಯೊಬ್ಬರ ಮಾತು:
ಮೊದಲ ಪರೀಕ್ಷೆ ರದ್ದಾಗಿದ್ದು ನಮಗೆ ವೈಯಕ್ತಿಕವಾಗಿ ದೊಡ್ಡ ಹಿನ್ನಡೆಯೇ ಸರಿ. ಆದರೆ ಅಕ್ರಮದ ಮೂಲಕ ಸೀಟು ಗಿಟ್ಟಿಸಿಕೊಳ್ಳುವುದನ್ನು ತಡೆಯಲು ಮರು ಪರೀಕ್ಷೆ ಅತ್ಯಗತ್ಯವಾಗಿತ್ತು. ಅದು ನಮ ವೃತ್ತಿಜೀವನದ ಸುರಕ್ಷತೆಗಾಗಿ ಕೈಗೊಂಡ ನಿರ್ಧಾರ. ಆದರೆ ಈಗ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ರಾಜಕೀಯ ನಾಟಕಗಳು ನಮ ಈ ಶ್ರಮ ಮತ್ತು ತ್ಯಾಗವನ್ನು ಹಗುರಗೊಳಿಸುತ್ತಿವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬರು ನೋವು ಹೊರಹಾಕಿದ್ದಾರೆ.
