ರಾಯ್ಪ್ಟುರ್,ಏ.19- ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಅವರ 4 ಕೋಟಿ ಮೌಲ್ಯದ ಆಸ್ತಿಗಳನ್ನು ಆರ್ಥಿಕ ಅಪರಾಧ ವಿಭಾಗ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 2024ರ ಜುಲೈನಲ್ಲಿ ವಿಷ್ಣೋಯ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ದಾಖಲಿಸಿತ್ತು . ತನಿಖೆಯ ವೇಳೆ, ವಿಷ್ಣೋಯ್ ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿತ ಸಂಸ್ಥೆಗಳ ಹೆಸರಿನಲ್ಲಿ ಅಕ್ರಮವಾಗಿ ಸಂಪಾದಿಸಲ್ಪಟ್ಟಿವೆ ಎಂದು ಶಂಕಿಸಲಾದ ಒಟ್ಟು ಒಂಭತ್ತು ಸ್ಥಿರ ಆಸ್ತಿಗಳನ್ನು (ಸುಮಾರು 4 ಕೋಟಿ ಮೌಲ್ಯದ) ತನಿಖಾ ಸಂಸ್ಥೆ ಗುರುತಿಸಿದೆ ಎಂದು ಹೇಳಲಾಗಿದೆ.
ಈ ಆಸ್ತಿಗಳನ್ನು ಜಪ್ತಿ ಮಾಡುವಂತೆ ರಾಯ್ಪುರದಲ್ಲಿರುವ ಭ್ರಷ್ಟಾಚಾರ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಏ. 17ರಂದು ವಿಚಾರಣೆ ನಡೆಸಿದ ಬಳಿಕ, ನ್ಯಾಯಾಲಯವು ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶಿಸಿದೆ, ಇದಕ್ಕೆ ಅನುಸಾರವಾಗಿ, ಭ್ರಷ್ಟಾಚಾರ ನಿಗ್ರಹ ದಳ/ಆರ್ಥಿಕ ಅಪರಾಧ ವಿಭಾಗವು ಆಸ್ತಿಗಳನ್ನು ಜಪ್ತಿ ಮಾಡಿದೆ.
ಜಪ್ತಿಯಾದ ಆಸ್ತಿಗಳನ್ನು ಮಾರಾಟ ಅಥವಾ ಹಸ್ತಾಂತರ ಮಾಡಲು ಸದ್ಯಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇಡಿ) ಹಿಂದೆಯೇ ವಿಷ್ಣೋಯ್ ಅವರಿಗೆ ಸಂಬಂಧಿಸಿದ ಐದು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.
ಇದಲ್ಲದೆ, ಇತರ ಸಾರ್ವಜನಿಕ ಅಧಿಕಾರಿಗಳ ವಿರುದ್ಧವೂ ಕ್ರಮಗಳು ಮುಂದುವರಿದಿವೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸೌಮ್ಯ ಚೌರಾಸಿಯಾ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
2009 ಬ್ಯಾಚ್ನ ಐಎಎಸ್ ಅಧಿಕಾರಿಯಾದ ವಿಷ್ಣೋಯ್ ಅವರನ್ನು 2022ರಲ್ಲಿ ಈ ಕಲ್ಲಿದ್ದಲು ಲೆವಿ ಹಗರಣದ ಸಂಬಂಧ ಮೊದಲ ಬಾರಿಗೆ ಬಂಧಿಸಿತ್ತು. ಬಳಿಕ ಕಳೆದ ವರ್ಷ ಸುಪ್ರೀಂ ಕೋರ್ಟ್ ಅವರಿಗೂ ಸೇರಿದಂತೆ ಹಲವು ಆರೋಪಿಗಳಿಗೆ ಜಾಮೀನು ನೀಡಿತ್ತು.
ಈ ಪ್ರಕರಣವು ಜುಲೈ 2020ರಿಂದ ಜೂನ್ 2022ರವರೆಗೆ ನಡೆದಿದ್ದ ಅಂದಾಜು 540 ಕೋಟಿ ಮೌಲ್ಯದ ಅಕ್ರಮ ಜಾಲಕ್ಕೆ ಸಂಬಂಧಿಸಿದ್ದು, ರಾಜ್ಯದಲ್ಲಿ ಸಾಗಾಟವಾಗುವ ಪ್ರತೀ ಟನ್ ಕಲ್ಲಿದ್ದಲಿಗೆ 25ರ ಅಕ್ರಮ ಲೆವಿ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪ ಇದೆ. ಇದರಲ್ಲಿ ಹಿರಿಯ ಅಧಿಕಾರಿಗಳು, ವ್ಯಾಪಾರಿಗಳು, ರಾಜಕೀಯ ನಾಯಕರು ಮತ್ತು ಮಧ್ಯವರ್ತಿಗಳ ಭಾಗಿಯಾಗಿದ್ದರೆಂದು ಆರೋಪಿಸಲಾಗಿದೆ.
