ಮುಂಬೈ,ಮಾ.28- ಸಂಬಂಧಿಕರೊಬ್ಬರ ಮನೆಯಿಂದ ಹಣ ಕದ್ದಿದ್ದಾರೆಂಬ ಶಂಕೆಯಲ್ಲಿ ತಂದೆ 10 ವರ್ಷದ ಮಗಳನ್ನು ರಾತ್ರಿಯಿಡೀ ಮನೆಯ ಕಬ್ಬಿಣದ ತೀರಿಗೆ ನೇತುಹಾಕಿದ್ದರಿಂದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ರುತುಜಾ ಸಾವನ್ನಪ್ಪಿರುವ ಬಾಲಕಿ. ಈಕೆ ರೈತ ದಾದು ಅಲಿಯಾಸ್ ನಾನಾ ಯಮ್ಗರ್ ಎಂಬುವರ ಪುತ್ರಿ. ಈಕೆಯ ಅಕ್ಕನಿಗೂ ಇದೇ ರೀತಿಯ ಚಿತ್ರಹಿಂಸೆ ನೀಡಿದ್ದು, ಪ್ರಸ್ತುತ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ವೈದ್ಯರು ರುತುಜಾ ಸಾವಿನ ಬಗ್ಗೆ ಸಾಂಗ್ಲಿಯ ಅಟ್ಪಾಡಿ ತಾಲೂಕಿನ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಯಮ್ಗರ್ ತನ್ನ ಇಬ್ಬರು ಹೆಣ್ಣುಮಕ್ಕಳಾದ ರುತುಜಾ ಮತ್ತು ಅನುಜಾ ಅವರನ್ನು ತಲೆಕೆಳಗಾಗಿ ತಮ ಮನೆಯ ತೀರಿಗೆ ಅಳವಡಿಸಲಾದ ಕಬ್ಬಿಣದ ಕೋನಕ್ಕೆ ಕಟ್ಟಿ ನೇತು ಹಾಕಿದ್ದಾನೆ. ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಹುಡುಗಿಯರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅವರು ಕುಡುಗೋಲಿನಿಂದ ಅವರ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ರುತುಜಾ ನೀರಿಗಾಗಿ ಮಾಡಿದ ವಿನಂತಿಸಿದರೂ ಆತನ ಹೃದಯ ಕರಗಲಿಲ್ಲ. ಇಬ್ಬರೂ ಹುಡುಗಿಯರು ರಾತ್ರಿಯಿಡೀ ತಲೆಕೆಳಗಾದ ಸ್ಥಿತಿಯಲ್ಲಿಯೇ ಇದ್ದುದ್ದರಿಂದ ಬೆಳಗ್ಗೆ ಕಿರಿಯ ಮಗಳು ಸಾವನ್ನಪ್ಪಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರನ್ನು ಪಂಢರಪುರದ ಆಸ್ಪತ್ರೆಗೆ ಕರೆದೊಯ್ಯುವಾಗ ರುತುಜಾ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ.
ಆಕೆಯ ಸಹೋದರಿ ಅನುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಬಾಲಕಿಯರ ತಂದೆಯನ್ನು ವಶಕ್ಕೆ ಪಡೆದಿದ್ದು, ಆತ ಮಾನಸಿಕವಾಗಿ ಅಸ್ಥಿರನಾಗಿದ್ದಾನೆಂದು ಹೇಳಿದ್ದಾರೆ.
