ಬರೇಲಿ,ಮೇ.17: ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶೇರ್ಗಢ ಪ್ರದೇಶದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಹಿಳೆ, ಅವರ ಪತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.ಪೊಲೀಸರ ಮಾಹಿತಿ ಪ್ರಕಾರ, ಕುಟುಂಬದವರು ಮನೆಯ ಮುಂಗಟ್ಟಿನಲ್ಲಿ ಮಲಗಿದ್ದ ವೇಳೆ ಆರೋಪಿ ಮನೆಯ ಮೇಲ್ಛಾವಣಿಯ ಮೂಲಕ ಒಳನುಗ್ಗಿ ಸೊಳ್ಳೆ ಪರದೆಯ ಮೂಲಕ ಅವರ ಮೇಲೆ ಆಸಿಡ್ ಎರಚಿದ್ದಾನೆ ಎನ್ನಲಾಗಿದೆ.
ಬೆಳಗ್ಗೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು,ಮ್ರಾಥಮಿಕ ತನಿಖೆಯಲ್ಲಿ ಆರೋಪಿ ಉಮೇಶ್ ಕಶ್ಯಪ್ ಎಂಬಾತ ಈಗಾಗಲೇ ವಿವಾಹಿತನಾಗಿದ್ದರೂ, ಸಂಬಂಧಿತ ಮಹಿಳೆಯನ್ನು ಮದುವೆಯಾಗಲು ಬಯಸುತ್ತಿದ್ದ ನೆಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ಮದುವೆಗೆ ನಿರಾಕರಿಸಿದ ಬಳಿಕ ಆರೋಪಿ ಆಕೆಯ ಮೇಲೆ ಆಸಿಡ್ ಪದಾರ್ಥ ಎರಚಲು ಯತ್ನಿಸಿದ್ದ ಎನ್ನಲಾಗಿದೆ .
ಗಾಯಾಳುಗಳನ್ನು ಶೇರ್ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಪ್ರಕರಣ ಸಂಬಂಧ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
