Homeರಾಷ್ಟ್ರೀಯಜಂತರ್‌ ಮಂತರ್‌ನಲ್ಲಿ ಪೆಲೆಟ್‌ ಗನ್‌ ಬಳಸಿದ ವಿವಾದ : 2 ದಿನಗಳಲ್ಲಿ ತನಿಖಾ ವರದಿ ಸಲ್ಲಿಕೆ

ಜಂತರ್‌ ಮಂತರ್‌ನಲ್ಲಿ ಪೆಲೆಟ್‌ ಗನ್‌ ಬಳಸಿದ ವಿವಾದ : 2 ದಿನಗಳಲ್ಲಿ ತನಿಖಾ ವರದಿ ಸಲ್ಲಿಕೆ

ನವದೆಹಲಿ,ಜು.27- ದೆಹಲಿಯ ಜಂತರ್‌ ಮಂತರ್‌ನಲ್ಲಿ ಜುಲೈ 20 ರಂದು ನಡೆದ ಪ್ರತಿಭಟನೆಯ ವೇಳೆ ಪೆಲೆಟ್‌ ಗನ್‌ ಬಳಸಿದ ವಿವಾದಾತಕ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಮೀಸಲು ಪೊಲೀಸ್‌‍ ಪಡೆ ತನ್ನ ತನಿಖಾ ವರದಿಯನ್ನು ಮುಂದಿನ ಎರಡು ದಿನಗಳಲ್ಲಿ ಮಹಾನಿರ್ದೇಶಕರಿಗೆ ಸಲ್ಲಿಸಲಿದೆ.

ಘಟನೆಯಲ್ಲಿ ಪೆಲೆಟ್‌ ಗನ್‌ ಹಾಗೂ ಎಲೆಕ್ಟ್ರಿಕ್‌ ಶಾಕ್‌ ಅಸ್ತ್ರಗಳನ್ನು ಬಳಸಿದ್ದ ಕ್ಷಿಪ್ರ ಕಾರ್ಯ ಪಡೆಗೆ ಸೇರಿದ ಸಿಬ್ಬಂದಿಯನ್ನು ಈಗಾಗಲೇ ಅಧಿಕೃತವಾಗಿ ಗುರುತಿಸಲಾಗಿದೆ.ಈ ಘಟನೆಯಲ್ಲಿ ಆರ್‌ಎಎಫ್‌ ಸಿಬ್ಬಂದಿ ಐದು ಸುತ್ತು ಪೆಲೆಟ್‌ ಗನ್‌ಗಳನ್ನು ಹಾರಿಸಿದ್ದು, ಇರ್ಷಾದ್‌ ಸೇರಿದಂತೆ ಇಬ್ಬರು ಅಥವಾ ಮೂವರು ಪ್ರತಿಭಟನಾಕಾರರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ. ಗಾಯಾಳುಗಳ ದೇಹದಿಂದ ವೈದ್ಯರು ಪೆಲೆಟ್‌ಗಳನ್ನು ಹೊರತೆಗೆದಿದ್ದಾರೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಪೆಲೆಟ್‌ ಗನ್‌ಗಳನ್ನು ಅಕ್ರಮವಾಗಿ ಬಳಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌ ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಿತ್ತು.

ಪ್ರಾಥಮಿಕ ವರದಿಗಳ ಪ್ರಕಾರ, ಪ್ರತಿಭಟನೆಯ ಸಮಯದಲ್ಲಿ ಡಿಫ್ಲೆಕ್ಟರ್‌ ಬ್ಯಾರೆಲ್‌ನೊಂದಿಗೆ ಅಳವಡಿಸಲಾದ ನಿರ್ದಿಷ್ಟ ಪೆಲೆಟ್‌ ಗನ್‌ ಅನ್ನು ನಿಯೋಜಿಸಲು ಯಾವುದೇ ಅಧಿಕೃತ ಪೂರ್ವಾನುಮೋದನೆ ಇರಲಿಲ್ಲ. ಆದರೆ, ಈ ಆಯುಧವು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿಲ್ಲ ಮತ್ತು ಇದು ಆರ್‌ಎಎಫ್‌ನ ಅಧಿಕೃತ ದಾಸ್ತಾನಿನ ಭಾಗವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂತಹ ಸಂವೇದನಾಶೀಲ ಸಂದರ್ಭಗಳಲ್ಲಿ ಈ ಮಾರಕವಲ್ಲದ ಎನ್ನಲಾದ ಆಯುಧವನ್ನು ಬಳಸಲು ತುರ್ತು ಪರಿಸ್ಥಿತಿ ಏನು ಸೃಷ್ಟಿಯಾಯಿತು ಮತ್ತು ಅದಕ್ಕೆ ಕಾರಣವಾದ ನೈಜ ಪರಿಸ್ಥಿತಿಗಳೇನು ಎಂಬುದನ್ನು ತನಿಖಾ ಆಯೋಗವು ಕೂಲಂಕಷವಾಗಿ ಪರಿಶೀಲಿಸುತ್ತಿದೆ.

ದೆಹಲಿ ಪೊಲೀಸ್‌‍ ಸ್ಪಷ್ಟನೆ :
ಈ ಗಲಭೆ ಹಾಗೂ ಪೆಲೆಟ್‌ ಗನ್‌ ಬಳಕೆಯ ವಿವಾದದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಬಗ್ಗೆ ದೆಹಲಿ ಪೊಲೀಸರು ಈ ಹಿಂದೆ ಸ್ಪಷ್ಟನೆ ನೀಡಿದ್ದಾರೆ. ಪ್ರತಿಭಟನಾ ಕಾರ್ಯಾಚರಣೆಯ ಸಮಯದಲ್ಲಿ ತಮ ಸಿಬ್ಬಂದಿ ಯಾವುದೇ ಪೆಲೆಟ್‌ ಗನ್‌ಗಳನ್ನು ಬಳಸಿಲ್ಲ ಎಂದು ದೆಹಲಿ ಪೊಲೀಸರು ಅಧಿಕೃತವಾಗಿ ನಿರಾಕರಿಸಿದ್ದಾರೆ. ಅಂತಹ ವರದಿಗಳು ಸಂಪೂರ್ಣವಾಗಿ ದಾರಿತಪ್ಪಿಸುವ ಮತ್ತು ನಕಲಿಯಾಗಿದ್ದು, ಸುಳ್ಳುಸುದ್ದಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ತನಿಖಾ ವರದಿಯು ಸಿಆರ್‌ಪಿಎಫ್‌ ಮಹಾನಿರ್ದೇಶಕರ ಕೈ ಸೇರುತ್ತಿದ್ದಂತೆ, ಘಟನೆಗೆ ಕಾರಣರಾದವರ ವಿರುದ್ಧ ಮುಂದಿನ ಸಾಂಸ್ಥಿಕ ಹಾಗೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News