ನವದೆಹಲಿ, ಮಾ.25- ಪರಿಹಾರ ನೀಡಿಕೆಯ ಸಂವಿಧಾನಾತ್ಮಕ ಖಾತರಿಯನ್ನು ನಿರಾಕರಿಸಲಾಗದು ಎಂದಿರುವ ಸುಪ್ರೀಂಕೋರ್ಟ್, ಭೂ ಸ್ವಾಧೀನ ಪ್ರಕರಣ ವೊಂದರಲ್ಲಿ ಆರ್ಥಿಕ ಹೊರೆ ಎಂಬ ಕಾರಣಕ್ಕೆ ಪರಿಹಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ
ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯ ಪೀಠವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್) ಸುಪ್ರೀಂಕೋರ್ಟಿನ 2025ರ ಫೆಬ್ರವರಿ 4ರ ಆದೇಶವನ್ನು ಮರು ಪರಿಶೀಲಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಿತು.
ಎನ್ಹೆಚ್ಎಐ ಅಧಿನಿಯಮದಡಿ ಭೂಸ್ವಾಧೀನ ಪಡಿಸಿಕೊಂಡಿದ್ದು ರೈತರಿಗೆ ಪೂರ್ವಾನ್ವಯವಾಗುವಂತೆ ಪರಿಹಾರ ನೀಡಬೇಕು ಎಂದು 2019ರಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಭೂ ಮಾಲೀಕರಿಗೆ ಪಾವತಿಸಬೇಕಾದ ಬಡ್ಡಿ ಭೂಸ್ವಾಧೀನ ಅಧಿನಿಯಮದನ್ವಯ ಶೇ.9 ರಷ್ಟಿರಬೇಕೇ ವಿನಃ ಎನ್ಹೆಚ್ಎಐ ಅಧಿನಿಯಮದ ಪ್ರಕಾರ (ಶೇ.5) ಅಲ್ಲ ಎಂದು ನ್ಯಾಯ ಪೀಠ ಹೇಳಿತು.
ತೀರ್ಪಿನ ಮರು ಪರಿಶೀಲನೆ ಕೋರಿ ಅರ್ಜಿಸಲ್ಲಿಸಿದ ಎನ್ಹೆಚ್ಎಐ ಪ್ರತಿಪಾದಿಸಿರುವಂತೆ ಅದು ಸ್ವಾಧೀನ ಪಡಿಸಿಕೊಂಡ ಭೂಮಿಯ ಬೆಲೆ 100 ಕೋಟಿ ರೂ. ಅಲ್ಲ, ಬದಲಾಗಿ 29000 ಕೋಟಿ ರೂ.ಗಳು ಎಂದು ಪೀಠವು ಗುರುತಿಸಿತು.
