ಮುಂಬೈ, ಜು. 6- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉಂಟಾದ ಪ್ರವಾಹ, ಭೂಕುಸಿತ ಹಾಗೂ ರಸ್ತೆ ಹಾನಿಯಿಂದಾಗಿ ಪುಣೆ -ಮುಂಬೈ ಎಕ್ಸ್ಪ್ರೆಸ್ವೇ ಮತ್ತು ಹಳೆಯ ಪುಣೆ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಪುಣೆ ಮತ್ತು ಮುಂಬೈ ನಡುವೆ ಯಾವುದೇ ಪ್ರಯಾಣ ಕೈಗೊಳ್ಳದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪೊಲೀಸರು ಹೊರಡಿಸಿದ ಸೂಚನೆಯಲ್ಲಿ, ಪುಣೆ-ಮುಂಬೈ ಎಕ್್ಸಪ್ರೆಸ್ವೇ ಹಾಗೂ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ದಿಕ್ಕಿನ ವಾಹನ ಸಂಚಾರವನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಮಾವಲ್ ಹಾಗೂ ತಮ್ಹಿಣಿ ಘಾಟ್ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪುಣೆಮುಂಬೈ ನಡುವಿನ ಪರ್ಯಾಯ ಮಾರ್ಗಗಳ ಮೇಲೂ ಪರಿಣಾಮ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಕ್್ಸಪ್ರೆಸ್ವೇಯ ಕನೆಕ್ಟಿಂಗ್ ಲಿಂಕ್ ಮತ್ತು ಮಿಸ್ಸಿಂಗ್ ಲಿಂಕ್ ವಿಭಾಗಗಳ ನಡುವಿನ ರಸ್ತೆಯ ಮೇಲೆ ಕಾಂಕ್ರೀಟ್ ಕಂಬವೊಂದು ಕುಸಿದಿರುವುದರಿಂದ ಆ ಮಾರ್ಗವನ್ನು ಮುಚ್ಚಲಾಗಿದೆ.
ಇನ್ನೊಂದೆಡೆ, ಹಳೆಯ ಪುಣೆ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಹಲವು ಪ್ರದೇಶಗಳಲ್ಲಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಅಲ್ಲಿಯೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಲೋಹಗಡ್ ಕೋಟೆ ಸಮೀಪದ ಪಾಟಣ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಒಂದು ಕುಟುಂಬ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದೆ.ಅಧಿಕಾರಿಗಳ ಪ್ರಕಾರ, ಖೋಪೋಲಿಕುಸ್ಗಾಂವ್ ನಡುವಿನ ಮಿಸ್ಸಿಂಗ್ ಲಿಂಕ್ಮಾರ್ಗದ ಸುರಂಗ 2ರ ನಿರ್ಗಮನದ ಬಳಿ ಭೂಕುಸಿತ ಸಂಭವಿಸಿದ್ದರಿಂದ ಸೋಮವಾರ ಮುಂಜಾನೆ ಪುಣೆಯಿಂದ ಮುಂಬೈ ಕಡೆ ಸಾಗುತ್ತಿದ್ದ ವಾಹನಗಳನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಲಾಗಿದೆ.
ಎರಡು ತಿಂಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದ 13 ಕಿಲೋಮೀಟರ್ ಉದ್ದದ ಮಿಸ್ಸಿಂಗ್ ಲಿಂಕ್ ಯೋಜನೆಯು ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ದಾಟುವ ಬೈಪಾಸ್ ಆಗಿದ್ದು, ಪ್ರಯಾಣದ ದೂರವನ್ನು 6 ಕಿಲೋಮೀಟರ್ಗಳಷ್ಟು ಕಡಿಮೆ ಮಾಡಿ, ಸುಮಾರು 25ರಿಂದ 30 ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸುವ ಉದ್ದೇಶ ಹೊಂದಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ಸೋಮವಾರ ಮುಂಜಾನೆ 4 ಗಂಟೆಯಿಂದಲೇ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ತಿಳಿಸಿದೆ.ಹೆದ್ದಾರಿ ಸಂಚಾರ ಪೊಲೀಸರು ಹಾಗೂ ಸಂಬಂಧಿತ ಇಲಾಖೆಗಳೊಂದಿಗೆ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಅತ್ಯಗತ್ಯವಿಲ್ಲದಿದ್ದರೆ ಮಾತ್ರ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.
ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಿಂದ ಮುಂಬೈಗೆ ತೆರಳುತ್ತಿದ್ದ ವಾಹನ ಚಾಲಕರೊಬ್ಬರು, ಮಿಸ್ಸಿಂಗ್ ಲಿಂಕ್ ಮುಚ್ಚಿದ್ದರಿಂದ ಲೋಣಾವಳಾ ಮಾರ್ಗವಾಗಿ ತೆರಳಬೇಕಾಯಿತು. ಪರಿಣಾಮ, ಲೋಣಾವಳಾ ನಗರ ಭಾಗದ ಎಕ್ಸ್ಪ್ರೆಸ್ವೇ ಯಲ್ಲಿ ಬೆಳಿಗ್ಗೆ 4 ಗಂಟೆಯಿಂದ ಭಾರೀ ವಾಹನ ದಟ್ಟಣೆಯಲ್ಲಿ ಸಿಲುಕಿರುವುದಾಗಿ ತಿಳಿಸಿದ್ದಾರೆ.ಖಂಡಾಲಾ ಘಾಟ್ ವಿಭಾಗದಲ್ಲಿಯೂ ನೀರು ನಿಂತಿರುವುದು ಹಾಗೂ ಭೂಕುಸಿತದಿಂದ ಎಕ್್ಸಪ್ರೆಸ್ವೇ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಹೆದ್ದಾರಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿ ಮಾಹಿತಿ ನೀಡಿದೆ.
