ಡೆಹ್ರಾಡೂನ್. ಮೇ.21- ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಂಭವಿಸಿದ ಭಾರಿ ಭೂಕುಸಿತದ ಬಳಿಕ ಸಿಲುಕಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಂಗಳವಾರ ತಡರಾತ್ರಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಸೋನ್ಪ್ರಯಾಗ ಮತ್ತು ಗೌರಿಕುಂಡ್ ನಡುವಿನ ಮುಂಕಟಿಯಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು.
ಮಣ್ಣು ಮತ್ತು ಬಂಡೆಗಳು ಮುಖ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಿದ ಪರಿಣಾಮ ದೊಡ್ಡ ಸಂಖ್ಯೆಯ ಯಾತ್ರಿಕರು ಸಿಲುಕಿಕೊಂಡಿದ್ದರು.ನಿರಂತರ ಬಂಡೆ ಕುಸಿತ, ಭಾರೀ ಮಳೆ, ಕತ್ತಲೆ ಮತ್ತು ದುರ್ಗಮ ಪರ್ವತ ಪ್ರದೇಶದ ಕಾರಣ ಪರಿಸ್ಥಿತಿ ಅತ್ಯಂತ ಸವಾಲಿನದ್ದಾಗಿತ್ತು.
ರುದ್ರಪ್ರಯಾಗ ಜಿಲ್ಲಾ ನಿಯಂತ್ರಣ ಕೊಠಡಿ ರಾತ್ರಿ 9.16ಕ್ಕೆ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಗೆ (ಎಸ್ಡಿಆರ್ಎಫ್) ಮಾಹಿತಿ ನೀಡಿದ್ದು, ಅಗತ್ಯ ಸಾಧನಗಳೊಂದಿಗೆ ಸೋನ್ಪ್ರಯಾಗದಿಂದ ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ತೆರಳಿತು.
ನಂತರ ಎಸ್ಡಿಆರ್ಎಫ್ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್) ಜಂಟಿಯಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.ಜಂಟಿ ತಂಡಗಳು ಸಿಲುಕಿದ್ದ 10,450 ಯಾತ್ರಿಕರನ್ನು ಅಪಾಯದ ಪ್ರದೇಶದಿಂದ ಸುರಕ್ಷಿತವಾಗಿ ಮಾರ್ಗದರ್ಶನ ಮಾಡಿ ಹೊರತೆಗೆದಿವೆ. ನಿರಂತರ ಮಳೆ ಮತ್ತು ಕಡಿಮೆ ಗೋಚರತೆಯ ನಡುವೆಯೂ ರಕ್ಷಣಾ ಸಿಬ್ಬಂದಿ ಯಾತ್ರಿಕರಿಗೆ ಧೈರ್ಯ ತುಂಬಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.ಅಧಿಕಾರಿಗಳು ಹೆದ್ದಾರಿಯನ್ನು ಶೀಘ್ರವೇ ಪುನಃ ಸಂಚಾರಕ್ಕೆ ಮುಕ್ತಗೊಳಿಸಿದ್ದು, ವಾಹನ ಸಂಚಾರವನ್ನು ಸಹಜ ಸ್ಥಿತಿಗೆ ತರಲಾಗಿದೆ.
ಎಸ್ಡಿಆರ್ಎಫ್ ಕಮಾಂಡೆಂಟ್ ಅರ್ಪಣ್ ಯದುವಂಶಿ ಮಾತನಾಡಿ, ಯಾತ್ರಾ ಮಾರ್ಗದಲ್ಲಿ ನಿಯೋಜಿಸಲಾಗಿದ್ದ ತಂಡಗಳು ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದರಿಂದ ತ್ವರಿತ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
