Friday, November 7, 2025
Home Blog Page 1813

ವಾಹನಗಳಿಗೆ ಹಾನಿ: ಗೊಂಬೆ ಗ್ಯಾಂಗ್‍ನ ಐದು ಮಂದಿ ಸೆರೆ

ಬೆಂಗಳೂರು, ನ.16- ರಸ್ತೆ ಬದಿ ನಿಲ್ಲಿಸಿದಂತಹ 15ಕ್ಕೂ ಹೆಚ್ಚು ಕಾರುಗಳು ಹಾಗೂ ಬೈಕ್‍ಗಳ ಗಾಜು ಒಡೆದು ಹಾನಿ ಮಾಡಿ ಪರಾರಿಯಾಗಿದ್ದ ಬೊಂಬೆ ಮಾಸ್ಕ್ ಗ್ಯಾಂಗ್‍ನ ಐದು ಮಂದಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ, ಲಾಂಗು, ಮುಖವಾಡಗಳು, ಎರಡು ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡಿ ಆ ಪ್ರದೇಶದಲ್ಲಿ ತಮ್ಮದೇ ಪಾರುಪತ್ಯ ಹೊಂದುವ ಸಲುವಾಗಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಕಂಡು ಬಂದಿದೆ. ಮೊದಲನೇ ಆರೋಪಿ ಪೀಣ್ಯ, ಗಂಗಮ್ಮನ ಗುಡಿ, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗಳ ಹಗಲು ಮತ್ತು ರಾತ್ರಿ ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ.

ಬಿಜೆಪಿ-ಜೆಡಿಎಸ್ ನಾಯಕರ ಹತಾಶೆಯಿಂದ ಗೊಂದಲ ಸೃಷ್ಟಿ: ಡಿಕೆಶಿ

ಕಳೆದ ನ.10ರಂದು ಮುಂಜಾನೆ ಎಂಟತ್ತು ಮಂದಿಯ ಗುಂಪೊಂದು ಬೊಂಬೆ ಮಾಸ್ಕ್ ಹಾಕಿಕೊಂಡು ಲಗ್ಗೆರೆಯ ರಸ್ತೆ ಬದಿಗಳಲ್ಲಿ ನಿಲ್ಲಿಸಿದಂತಹ ಕಾರುಗಳು ಹಾಗೂ ಬೈಕ್‍ಗಳ ಗಾಜುಗಳನ್ನು ಒಡೆದು ಪುಂಡಾಟ ಮೆರೆದಿತ್ತು. ಬೆಳಗಾಗುತ್ತಿದ್ದಂತೆ ಕಾರು ಹಾಗೂ ಬೈಕ್‍ಗಳ ಮಾಲೀಕರು ನೋಡಿ ತಕ್ಷಣ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ರಸ್ತೆಗಳಲ್ಲಿದ್ದಂತಹ ಸಿಸಿ ಕ್ಯಾಮೆರಾ ಪರಿಶೀಲಿಸಿ ಅದರಲ್ಲಿದ್ದ ದೃಶ್ಯಾವಳಿಗಳನ್ನು ಆಧರಿಸಿ ಐದು ಮಂದಿ ಆರೋಪಿ ಗಳನ್ನು ಪತ್ತೆಹಚ್ಚಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಿಜೆಪಿ-ಜೆಡಿಎಸ್ ನಾಯಕರ ಹತಾಶೆಯಿಂದ ಗೊಂದಲ ಸೃಷ್ಟಿ: ಡಿಕೆಶಿ

ಬೆಂಗಳೂರು,ನ,16- ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಹತಾಶೆ ಹಾಗೂ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿಯವರಿಗೆ ಕೆಲಸ ಇಲ್ಲ. ಯತೀಂದ್ರ ಸಿದ್ದರಾಮಯ್ಯ ಕೆಡಿಪಿ ಸದಸ್ಯರಾಗಿದ್ದಾರೆ. ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು. ಜನಸಂಪರ್ಕ ಸಭೆ ನಡೆಸುವಾಗ ಫೋನಿನಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕೆಲವು ಶಾಲೆಗಳಿಗೆ ಕುರ್ಚಿ, ಬೆಂಚುಗಳನ್ನು ಪೂರೈಸುವ ಪ್ರಯತ್ನ ನಡೆಯುತ್ತಿದೆ. ಆ ಪಟ್ಟಿ ತಯಾರಿಸುವಾಗ ವಿವೇಕಾನಂದ ಎಂಬ ಅಧಿಕಾರಿ ಒಂದೆರಡು ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ. ಸ್ಥಳೀಯರು ಈ ಬಗ್ಗೆ ಯತೀಂದ್ರ ಅವರಿಗೆ ದೂರು ನೀಡಿದ್ದಾರೆ. ಚುನಾವಣೆ ವೇಳೆ ಮಾತುಕೊಟ್ಟಂತೆ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕರ್ತವ್ಯ. ಯತೀಂದ್ರ ಅದರಂತೆ ನಡೆದುಕೊಂಡಿದ್ದಾರೆ ಎಂದರು.

ತಂದೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪರವಾಗಿ ಯತೀಂದ್ರ ವರುಣಾ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಫೋನ್‍ನಲ್ಲಿ ಮಾತನಾಡುವಾಗ ಎಲ್ಲಿಯೂ ಅಧಿಕಾರಿಗಳ ಹೆಸರು ಹಾಗೂ ಹುದ್ದೆ ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್-ಬಿಜೆಪಿಯವರು ವರ್ಗಾವಣೆ ದಂಧೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರ್ಗಾವಣೆ ನಿಂತು ಬಹಳ ದಿನವಾಗಿದೆ. ದಂಧೆ ಎಲ್ಲಿ ನಡೆಯುತ್ತಿದೆ ಎಂಬುದನ್ನು ತೋರಿಸಿ ಎಂದು ಸವಾಲು ಹಾಕಿದ ಡಿ.ಕೆ.ಶಿವಕುಮಾರ್, ಯತೀಂದ್ರ ಮಾಜಿ ಶಾಸಕರಾಗಿದ್ದಾರೆ. ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಲು ನಾಲ್ಕೈದು ಅಧಿಕಾರಿಗಳು ಬೇಕು ಎಂದು ಕೇಳಿದ್ದರೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.

ಯತೀಂದ್ರ ವಿಡಿಯೋ ಅಪಪ್ರಚಾರ: ಸಿಎಂ ಅಸಮಾಧಾನ

ಮುಖ್ಯಮಂತ್ರಿ ಯಾದವರಿಗೆ ತಮ್ಮ ಕ್ಷೇತ್ರ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಉಪ ಮುಖ್ಯಮಂತ್ರಿಯಾದ ನನಗೂ ನನ್ನ ಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡಲು ಆಗುತ್ತಿಲ್ಲ. ಹೀಗಾಗಿ ತಮ್ಮ ಸಹೋದರರೂ ಆಗಿರುವ ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರದ ಜನರ ಅಹವಾಲು ಕೇಳುತ್ತಾರೆ. ಮನೆಯ ಬೇಡಿಕೆ ಸೇರಿದಂತೆ ಹಲವಾರು ಮನವಿಗಳನ್ನು ಆಧರಿಸಿ ಫಲಾನುಭವಿಗಳ ಆಯ್ಕೆಯಾಗುತ್ತದೆ. ಆ ಪಟ್ಟಿಯನ್ನು ಪರಿಶೀಲಿಸಿ ತಾವು ಸಹಿ ಹಾಕುವುದು ಸಾಮಾನ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಪ್ರಜ್ಞೆ ಇದೆ. ಅವರನ್ನು ಯಾರೂ ದಾರಿ ತಪ್ಪಿಸಲು ಆಗುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್‍ನವರಿಂದ ಸಿದ್ದರಾಮಯ್ಯ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಜೆಡಿಎಸ್‍ನ ಶಾಸಕರು ನಿನ್ನೆ ರಾತ್ರಿ ತಮ್ಮನ್ನು ಭೇಟಿಯಾಗಿಲ್ಲ. ಕ್ಷೇತ್ರದ ಅಭಿವೃದ್ದಿ ಕೆಲಸಗಳಿದ್ದರೆ ಬರುತ್ತಾರೆ. ನಾವು ತುರ್ತಾಗಿ ಕೆಲಸ ಮಾಡಿಕೊಡುತ್ತೇವೆ. ಅದರ ಹೊರತಾಗಿ 13 ಮಂದಿ ಜೆಡಿಎಸ್ ಶಾಸಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂಬುದೆಲ್ಲಾ ವದಂತಿ. ಸದ್ಯಕ್ಕೆ ಯಾವ ಶಾಸಕರೂ ಬರುವುದಿಲ್ಲ. ಯಾರೂ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಪುನರುಚ್ಚರಿಸಿದರು.

ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿಯವರು ಹತಾಷೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡುವಾಗ ಜಮೀನುಗಳಿಗೆ ಬೇಲಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲಿ, ಯಾವ ಜಮೀನು, ಯಾವ ಬೇಲಿ, ಯಾವ ಬಂಡೆ, ಯಾವ ಕಲ್ಲು ಎಂಬುದನ್ನು ತೋರಿಸಲಿ ಎಂದು ತಿರುಗೇಟು ನೀಡಿದರು.

ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಸಂಬಂಧ ಪಟ್ಟಂತೆ ಕುಮಾರಸ್ವಾಮಿಯವರೇ ತಪ್ಪು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಯಾರೋ ಗುತ್ತಿಗೆದಾರನಿಗೆ ಮನೆ ಅಲಂಕಾರ ಮಾಡಲು ಹೇಳಿರಬಹುದು. ಆತ ತಪ್ಪು ಮಾಡಿರುತ್ತಾನೆ. ಕಾರು ನನ್ನ ಹೆಸರಿನಲ್ಲಿ ನೋಂದಣಿಯಾಗಿದೆ. ಚಾಲಕ ಅಪಘಾತ ಮಾಡಿದರೆ ಡಿ.ಕೆ.ಶಿವಕುಮಾರ್ ಕಾರು ಅಪಘಾತವಾಗಿದೆ ಎಂದೇ ಹೇಳುತ್ತಾರೆ. ಚಾಲಕ ಅಪಘಾತ ಮಾಡಿದ್ದಾನೆ ಎಂದು ಹೇಳುವುದಿಲ್ಲ. 25 ವರ್ಷಗಳ ಹಿಂದೆ ಇಂಥದ್ದೇ ಪ್ರಕರಣವೊಂದು ತಮ್ಮ ಜೀವನದಲ್ಲಿ ನಡೆದಿತ್ತು ಎಂದು ಉದಾಹರಣೆ ಕೊಟ್ಟರು.

ಡಿ.4 ರಿಂದ ಬೆಳಗಾವಿಯಲ್ಲಿ ಅಧಿವೇಶನ, ಗಲಾಟೆ ‘ಗ್ಯಾರಂಟಿ’

ಕುಮಾರಸ್ವಾಮಿಯವರು ಪ್ರತಿಬಾರಿಯೂ ಲೂಟಿ.. ಲೂಟಿ.. ಎಂದು ಹೇಳುತ್ತಾರೆ. ಅವರ ಅನುಭವ ಆಚಾರ-ವಿಚಾರಗಳನ್ನು ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಬಿಜೆಪಿಗೆ ಈಗಷ್ಟೇ ಹೊಸ ಅಧ್ಯಕ್ಷರ ನೇಮಕವಾಗಿದೆ. ಅಸಮಾಧಾನ ಹೊಂದಿರುವವರ ಕೈ-ಕಾಲು ಕಟ್ಟಿ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.

ಮುರುಘಾ ಶ್ರೀ ಜೈಲಿನಿಂದ ಬಿಡುಗಡೆ

ಚಿತ್ರದುರ್ಗ, ನ.16- ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಮುರುಘಾ ಶ್ರೀಗಳನ್ನು ಬಂಧಿಸಲಾಗಿತ್ತು. ಜಿಲ್ಲಾ ಕಾರಾಗೃಹದಲ್ಲಿದ್ದ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್‍ಗೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ಸಲ್ಲಿಸಿದ್ದರು.

ಕಳೆದ ನವೆಂಬರ್ 8ರಂದು ಫೋಕ್ಸೊ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, 14 ತಿಂಗಳ ಕಾರಾಗೃಹ ವಾಸದ ನಂತರ ಇಂದು ಬಿಡುಗಡೆಯಾಗಿದ್ದಾರೆ.

ಷರತ್ತುಬದ್ಧ ಜಾಮೀನಿನಲ್ಲಿ ತಿಳಿಸಿರುವಂತೆ ಚಿತ್ರದುರ್ಗ ಜಿಲ್ಲಾ ಪ್ರವೇಶ ನಿಷೇಧವಾಗಿರುವುದರಿಂದ ಮುರುಘಾ ಶ್ರೀಗಳು ಎಲ್ಲಿಗೆ ತೆರಳುತ್ತಾರೆಂಬುವುದು ತಿಳಿದು ಬಂದಿಲ್ಲ. ಬಿಡುಗಡೆಯಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಅವರನ್ನು ಸಮಾಧಾನಪಡಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ.

ಯತೀಂದ್ರ ವಿಡಿಯೋ ಅಪಪ್ರಚಾರ: ಸಿಎಂ ಅಸಮಾಧಾನ

ಬೆಂಗಳೂರು,ನ,16- ಮಾಜಿ ಶಾಸಕರೂ ಆಗಿರುವ ತಮ್ಮ ಪುತ್ರ ಡಾ.ಯತೀಂದ್ರ ಅವರು ಫೋನ್‍ನಲ್ಲಿ ಮಾತನಾಡುವಾಗ ಸಿಎಸ್‍ಆರ್ ನಿಯಡಿ ಶಾಲಾ ಕಟ್ಟಡಗಳ ದುರಸ್ತಿಯ ಬಗ್ಗೆ ಚರ್ಚೆ ಮಾಡಿದ್ದಾರೆ. ಅದನ್ನು ತಿರುಚಿ ವರ್ಗಾವಣೆಯ ಪಟ್ಟಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಮಾತನಾಡಿರುವುದರಲ್ಲಿ ಎಲ್ಲಿಯೂ ವರ್ಗಾವಣೆಯ ಪ್ರಸ್ತಾಪವಾಗಿಲ್ಲ. ನನ್ನ ರಾಜಕೀಯ ಜೀವನದಲ್ಲಿ ದುಡ್ಡು ತೆಗೆದುಕೊಂಡು ಒಂದೇ ಒಂದು ವರ್ಗಾವಣೆ ಮಾಡಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿಯಾಗುವುದಾಗಿ ಸವಾಲು ಹಾಕಿದರು.

ಬಂಧಿತ ಸಚಿವ ಸೆಂಥಿಲ್ ಬಾಲಾಜಿಗೆ ಆಂಜಿಯೋಗ್ರಾಮ್ ಮಾಡಲು ಸೂಚನೆ

ಯತೀಂದ್ರ ವರುಣಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯ ಸದಸ್ಯರ ಬಗ್ಗೆ ಚರ್ಚೆ ಮಾಡಲಾಯಿತು. ತಾವು ಆಯ್ಕೆಯಾಗಿರುವ ವರುಣಾ ಕ್ಷೇತ್ರವನ್ನು ನೋಡಿಕೊಳ್ಳಲು ಯತೀಂದ್ರ ಅವರಿಗೆ ಹೇಳಿದ್ದೇನೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‍ಆರ್)ಯಡಿ ಕ್ಷೇತ್ರದಲ್ಲಿ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿಸಲಾಗುತ್ತಿದೆ. ಸಚಿವ ಎಚ್.ಸಿ.ಮಹದೇವಪ್ಪ ಈ ಪಟ್ಟಿ ನೀಡಿದ್ದಾರೆ. ಯತೀಂದ್ರ ಆ ಕುರಿತು ಚರ್ಚೆ ಮಾಡಿದರು ಎಂದು ಹೇಳಿದರು.

ಸಂಭಾಷಣೆ ವೇಳೆ ಎಲ್ಲಿಯೂ ವರ್ಗಾವಣೆ ಉಲ್ಲೇಖ ಇಲ್ಲ. ಆ ರೀತಿ ಹೇಳಿರುವ ವಿಡಿಯೋ ಇದ್ದರೆ ತೋರಿಸಿ. ನಾಲ್ಕೈದು ಹೆಸರುಗಳು ಎಂದರೆ ಅದು ವರ್ಗಾವಣೆಯ ಪಟ್ಟಿ ಅಲ್ಲ. ಶಾಲೆಗಳ ದುರಸ್ತಿಯ ಪಟ್ಟಿ ಎಂದು ಸಮರ್ಥಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯತೀಂದ್ರ ಮಾತನಾಡಿರುವುದರಲ್ಲಿ ಏನೋ ಇದೆ ಎಂದು ಭಾರೀ ಪ್ರಮಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು : HDK

ಬೆಂಗಳೂರು, ನ.16- ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ಬಹಿರಂಗವಾಗಿರುವ ಮುಖ್ಯಮಂತ್ರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ದಂಧೆ ಆರೋಪಕ್ಕೆ ಈ ವಿಡಿಯೋಗಿಂತ ಮತ್ತೊಂದು ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರಲ್ಲದೆ, ಆತ್ಮಸಾಕ್ಷಿ ಇದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಶೇ. 20ರಷ್ಟು ಕಮಿಷನ್ ಆರೋಪವನ್ನು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮಾಡಿದ್ದರು. ದಾವಣಗೆರೆಯಲ್ಲಿ ಮಾಡಿದ್ದ ಈ ಆರೋಪಕ್ಕೆ ಯಾವ ಸಾಕ್ಷ್ಯವನ್ನು ಒದಗಿಸಿದ್ದರು ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪೇಸಿಎಂ ಪೋಸ್ಟರ್ ಹಾಕಿದ್ದರು. ಅದಕ್ಕೆ ಯಾವ ದಾಖಲೆ ನೀಡಿದ್ದರು ಎಂದ ಅವರು, ಯತೀಂದ್ರ ಅವರು ಯಾರೊಂದಿಗೆ ಮಾತನಾಡಿದ್ದಾರೆ, ಎಂಬುದನ್ನು ಬಹಿರಂಗ ಪಡಿಸಲಿ. ದೂರವಾಣಿಯಲ್ಲಿ ಅಪ್ಪ ಎಂದು ಯಾರನ್ನು ಕರೆದರು, ದೂರವಾಣಿ ಮಾಡಿ ಯತೀಂದ್ರ ಅವರನ್ನು ಕೇಳಿದ್ದು, ಮುಖ್ಯಮಂತ್ರಿ ಅಲ್ಲವೆ? ಎಂದು ವಿಡಿಯೋದಲ್ಲಿದೆ ಎನ್ನಲಾದ ಮಾಹಿತಿಯನ್ನು ಪ್ರಸ್ತಾಪಿಸಿದರು.

ಪಂಚರಾಜ್ಯಗಳ ಚುನಾವಣೆ : ನಾಳೆ ಮಧ್ಯಪ್ರದೇಶದಲ್ಲಿ ಮತದಾನ

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರು ಮಾಡಿದ ಆರೋಪದ ವಿಡಿಯೋವನ್ನು ಪ್ರದರ್ಶಿಸಿದ ಅವರು, ಮುಖ್ಯಮಂತ್ರಿಯಾದವರು ಪುತ್ರನನ್ನು ಕೇಳಿ ಆಡಳಿತ ನಡೆಸುವುದೇ, ವಿವೇಕಾನಂದ ಯಾರು? ಮಹದೇವ ಯಾರು ಎಂದು ಪ್ರಶ್ನಿಸಿದರು.

ಕಂಬದಿಂದ ವಿದ್ಯುತ್ ಕದಿಯುವ ದಾರಿದ್ರ್ಯ ನನಗೆ ಬಂದಿಲ್ಲ. ಆಚಾರ್ತುದಿಂದ ಉಂಟಾಗಿದ್ದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಆದರೂ ಜೆಡಿಎಸ್ ಕಚೇರಿಯ ಕಾಂಪೌಂಡ್‍ಗೆ ಆಕ್ಷೇಪಾರ್ಹ ಪೋಸ್ಟನ್ನು ಅಂಟಿಸಲಾಗಿದೆ ಎಂದರು. ವಿಜಯೇಂದ್ರ ಅವರನ್ನು ಅನಧಿಕೃತ ಸಿಎಂ ಎಂದು ಆರೋಪಿಸುತ್ತಿದ್ದ ನೀವು ಈಗ ಸೂಪರ್ ಸಿಎಂ ಯಾರು ಹೇಳಿ ಎಂದು ಪ್ರಶ್ನಿಸಿದರು.

ನಾಡಿನ ಜನತೆ ಒಳ್ಳೆಯ ರೀತಿಯಲ್ಲಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಲೂಟಿ ಮಾಡಲು ಅಲ್ಲ. ಯತೀಂದ್ರ ಅವರು ಶಾಲೆಗಳ ಸಿಎಸ್‍ಆರ್ ನಿ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ಬಗ್ಗೆ ಅಲ್ಲ ಎನ್ನುವುದಾದರೆ ದಾಖಲೆಗಳನ್ನು ಜನರ ಮುಂದಿಡಿ. ಮೈಸೂರು ಜಿಲ್ಲೆಯ ಡಿಡಿಪಿಐಗೆ ಕಳುಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ. ಚುನಾವಣೆಗಾಗಿ ಕೆಲವರಿಂದ ಸಹಕಾರ ಪಡೆದಿದ್ದು, ನಾನು ಶೇ. 100ರಷ್ಟು ಶುದ್ಧನಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದರು.

ತನಿಖೆಗೆ ಸಿದ್ಧ:
ನಮ್ಮ ಕುಟುಂಬದ ಆಸ್ತಿ ತನಿಖೆಗೆ ಈಗಲೂ ಸಿದ್ದ ಎಂದ ಅವರು, ದಾಸನಪುರ ಹೋಬಳಿಯಲ್ಲಿ ಮೂರುವರೆ ಎಕರೆ ಕೆರೆ ನುಂಗಿ ಹಾಕಿದವರು ಯಾರು ಎಂದು ಪ್ರಶ್ನಿಸಿದ ಅವರು, ನಮ್ಮ ಆಸ್ತಿಯ ಬಗ್ಗೆ ಆರೋಪ ಮಾಡಿದವರನ್ನೇ ಕೇಳಿ? ಸರ್ಕಾರದ ಆದೇಶವನ್ನು ಮಾರಾಟಕ್ಕೆ ಇಡಬೇಡಿ ಎಂದರು.

ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಮಾಡಿರುವ ಯಾವ ಆರೋಪವನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ನೈಸ್ ಸಂಸ್ಥೆಯ ಬಗ್ಗೆ ಸದನ ಸಮಿತಿ ನೀಡಿರುವ ವರದಿಯ ಶಿಫಾರಸ್ಸು ಏಕೆ ಅನುಷ್ಠಾನಗೊಳಿಸಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದ ಅವರು ವರ್ಗಾವಣೆ ವಿಚಾರ ಎನ್ನಲಾದ ವಿಡಿಯೋ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

ವಿಡಿಯೋ ಆದರಿಸಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ಆರೋಪಗಳ ಸುರಿ ಮಳೆಗೈದು ವರ್ಗಾವಣೆ ದಂಧೆ ನಡೆಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ವಿಧಾನಪರಿಷತ್ ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ರಮೇಶ್ ಗೌಡ ಉಪಸ್ಥಿತರಿದ್ದರು.

ಡಿ.4 ರಿಂದ ಬೆಳಗಾವಿಯಲ್ಲಿ ಅಧಿವೇಶನ, ಗಲಾಟೆ ‘ಗ್ಯಾರಂಟಿ’

ಬೆಂಗಳೂರು, ನ.16-ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಡಿ.4ರಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.4ರಂದು ಬೆಳಿಗ್ಗೆ 11ಗಂಟೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅವೇಶನಗಳು ಸಮಾವೇಶಗೊಳಲಿವೆ.

ಅಂದಿನಿಂದ ಡಿ.15ರವರೆಗೆ ಹತ್ತು ದಿನಗಳ ಅಧಿವೇಶನ ನಡೆಸಲು ನಿಗದಿಪಡಿಸಲಾಗಿದೆ. ಈ ಸಂಬಂಧ ವಿಧಾನಸಭೆ ಸಚಿವಾಲಯ ಅಕೃತ ಪ್ರಕಟಣೆ ಹೊರಡಿಸಿದೆ. ಪ್ರತಿ ವರ್ಷದಂತೆ ಎರಡು ವಾರ ಕಾಲ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಲಾಗುತ್ತದೆ. ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸುವರ್ಣ ವಿಧಾನಸೌಧದಲ್ಲಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದ್ದಾರೆ. ಉಭಯ ಸಚಿವಾಲಯಗಳು ಅಧಿವೇಶನಕ್ಕೆ ಸಿದ್ಧತೆ ಆರಂಭಿಸಿವೆ.

16ನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯ ಲೋಪ-ದೋಷಗಳು, ಬರಪರಿಸ್ಥಿತಿಯಿಂದ ಉಂಟಾಗಿರುವ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡದಿರುವುದು ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗುತ್ತಿವೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಹಾಗೆಯೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ತೀವ್ರ ಬರಪರಿಸ್ಥಿತಿ ಇದ್ದರೂ ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂಸುತ್ತಿಲ್ಲ ಎಂದು ಆರೋಪಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ, ಕುಡಿಯುವ ನೀರು, ಗುಳೆ ಹೋಗದಂತೆ ಉದ್ಯೋಗ, ಜಾನುವಾರುಗಳ ಮೇವು, ವಿದ್ಯುತ್ ಅಭಾವ ಮೊದಲಾದ ಜ್ವಲಂತ ವಿಚಾರಗಳು ಅಧಿವೇಶನದಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರದ ವೇದಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ವಿವಾದಕ್ಕೀಡಾದ ಸಿಎಂ ಪುತ್ರ ಯತೀಂದ್ರರ ವಿಡಿಯೋ

ಬೆಂಗಳೂರು, ನ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೊಬೈಲ್‍ನಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಚರ್ಚಿಸಲಾದ ಮಾಹಿತಿ ಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿವೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಜನ ಸಂಪರ್ಕ ಸಭೆ ನಡೆಸುವ ವೇಳೆ ಯತೀಂದ್ರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆರಂಭದಲ್ಲೇ ಹಲೋ ಅಪ್ಪಾ ಎಂದು ಮಾತು ಶುರು ಮಾಡಿದ್ದಾರೆ.

ಹಾಗಾಗಿ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಜೊತೆಯಲ್ಲೇ ಮಾತನಾಡಿದ್ದಾರೆ ಎಂದು ಭಾವಿಸಲಾಗಿದೆ.
ವಿವೇಕಾನಂದನಾ ಎಲ್ಲಿಗೆ… ಇಲ್ಲಪ್ಪ ಇದ್ಯಾವುದು ಕೊಟ್ಟಿಲ್ಲ. ಯಾರು ಆ ಮಹದೇವ್… ? ಕೊಡಿ ಅವನಿಗೆ, ಅದಕ್ಕೆ ಹೇಳಿದ್ದು, ಕೊಡಿ ಆ ಮಹದೇವ್‍ಗೆ ಹೇಳ್ತೀನಿ. ನಾನು ಕೊಟ್ಟಿರೋದೆ ಐದು, ಅಲ್ಲಿ ಕೊಡಿ ಅದು ಎಂದು ಹೇಳುತ್ತಾರೆ.

ಅತ್ತ ಕಡೆ ಮೊಬೈಲ್ ಕೈ ಬದಲಾದಂತೆ ಕಂಡು ಬರುತ್ತಿದ್ದು, ಹಲೋ ಮಹದೇವ್ ಎಂದು ಯತೀಂದ್ರ ಮಾತು ಮುಂದುವರೆಸುತ್ತಾರೆ. ಮಹದೇವ್ ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ.. ? ಮತ್ತೆ ಇದೆಲ್ಲಾ ಯಾರು ಕೊಡ್ತಿರೋದು, ಲಿಸ್ಟ್ ಅಲ್ಲಿ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ, ಅಷ್ಟೇ ಮಾತ್ರ ಮಾಡಿ, ಒಕೆ ಎಂದು ಹೇಳಿ ಯತೀಂದ್ರ ಮೊಬೈಲ್ ಅನ್ನು ಸಹಾಯಕರಿಗೆ ಕೊಡುತ್ತಾರೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಈ ವಿಡಿಯೋ ಮತ್ತು ಆಡಿಯೋದಲ್ಲಿ ಕಂಡು ಬಂದಿರುವಂತೆ ನಾಲ್ಕೈದು ಹೆಸರುಗಳನ್ನು ಕೊಡಲಾಗಿದೆ. ಅಷ್ಟಕ್ಕೆ ಸೀಮಿತವಾಗಿ ಕೆಲಸವಾಗಬೇಕು, ಉಳಿದವನ್ನು ಪರಿಗಣಿಸಬಾರದು ಎಂದು ಯತೀಂದ್ರ ಸೂಚನೆ ನೀಡಿರುವುದು ಕಂಡು ಬಂದಿದೆ.

ಆ ವಿಡಿಯೋದಲ್ಲಿ ಹೇಳಿರುವಂತೆ ನಾಲ್ಕೈದು ಹೆಸರುಗಳು ವರ್ಗಾವಣೆಯೇ, ಗುತ್ತಿಗೆಯೇ, ನೇಮಕವೇ ಯಾವುದು ಎಂದು ಸ್ಪಷ್ಟವಾಗಿಲ್ಲ. ಸಬ್ ರಿಜಿಸ್ಟರ್ ಆಗಿದ್ದ ಮಹದೇವ್ ಸಿದ್ದರಾಮಯ್ಯ ಅವರ ಸಂಬಂಧಿ ಎನ್ನಲಾಗಿದೆ. ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಕಾರಿಯನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯತೀಂದ್ರ ಅವರ ಜೊತೆಯಲ್ಲಿ ಮಾತನಾಡುವಾಗ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಾತುಕತೆ ಯಾವ ವಿಚಾರ ಕುರಿತು ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿ ಇದನ್ನು ವರ್ಗಾವಣೆ ದಂಧೆ ಎಂದು ವ್ಯಾಖ್ಯಾನಿಸಿದೆ. ಯತೀಂದ್ರ ಮೊದಲಿನಿಂದಲೂ ಅಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದು ಮತ್ತೂ ಮುಂದುವರೆದಿದೆ, ಎಲ್ಲಾ ಕಾಲದಲ್ಲೂ ಇದು ನಡೆದಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದು ಸ್ವಲ್ಪ ಹೆಚ್ಚಾಗಿದೆ ಎಂದು ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.

ಬೆಳಗಾವಿ ವಿಧಾನಮಂಡಲದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದು, ಅದಕ್ಕೂ ಮುನ್ನಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲು ಚರ್ಚಿಸುವುದಾಗಿ ತಿಳಿಸಿದ್ದಾರೆ. ಜೆಡಿಎಸ್ ಕೂಡ ಇದನ್ನು ವರ್ಗಾವಣೆ ದಂಧೆ ಎಂದು ಟೀಕಿಸಿದೆ.

ಬಂಧಿತ ಸಚಿವ ಸೆಂಥಿಲ್ ಬಾಲಾಜಿಗೆ ಆಂಜಿಯೋಗ್ರಾಮ್ ಮಾಡಲು ಸೂಚನೆ

ಚೆನ್ನೈ, ನ.15- ಬಂಧಿತ ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಇಲ್ಲಿನ ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸರಣಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಂಜಿಯೋಗ್ರಾಮ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಜೂನ್‍ನಲ್ಲಿ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿತ್ತು. ಪುಝಲ್ ಜೈಲಿನಲ್ಲಿದ್ದ ಬಾಲಾಜಿ ಅವರ ಆರೋಗ್ಯ ಬುಧವಾರ ಹದಗೆಟ್ಟಿದೆ. ಬೆನ್ನು, ಕುತ್ತಿಗೆ ನೋವು ಮತ್ತು ಕಾಲಿನ ಮರಗಟ್ಟುವಿಕೆ ಹೆಚ್ಚಾಗಿದ್ದರಿಂದ ತಕ್ಷಣ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಓಮಂದೂರರ್ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೃದ್ರೋಗ ತಜ್ಞರನ್ನೊಳಗೊಂಡ ವೈದ್ಯರ ತಂಡವು ಅವರನ್ನು ಪರೀಕ್ಷಿಸಿದೆ. ಎಕೋ ಮತ್ತು ಇಸಿಜಿಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸಗಳು ಕಂಡು ಬಂದಿಲ್ಲ. ಸಣ್ಣ ಪ್ರಮಾಣದ ಸಮಸ್ಯೆ ಇರುವುದರಿಂದ ಆಂಜಿಯೋಗ್ರಾಮ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಆಂಜಿಯೋಗ್ರಾಮ್ ಎನ್ನುವುದು ವ್ಯಕ್ತಿಯ ಹೃದಯದ ರಕ್ತನಾಳಗಳನ್ನು ನೋಡಲು ಎಕ್ಸ್-ರೇ ಇಮೇಜಿಂಗ್ ಅನ್ನು ಬಳಸುವ ಒಂದು ವಿಧಾನವಾಗಿದೆ. ಹೃದಯಕ್ಕೆ ಹೋಗುವ ರಕ್ತದ ಹರಿವಿನಲ್ಲಿ ತಡೆಗಳಿರುವುದನ್ನು ಪತ್ತೆ ಹಚ್ಚಲು ಸಾಮಾನ್ಯವಾಗಿ ಈ ಪರೀಕ್ಷೆ ಮಾಡಲಾಗುತ್ತದೆ.

47 ವರ್ಷ ವಯಸ್ಸಿನ ಸಚಿವರು ಜೂನ್ 14 ರಂದು ಅವರನ್ನು ಬಂಸಿದ ನಂತರ ಜೂನ್ 21 ರಂದು ಕಾಪೆರ್ರೇಟ್ ಆಸ್ಪತ್ರೆಯಲ್ಲಿ ಪರಿಧಮನಿಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳ ಪಡಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದಾಗಿನಿಂದ ಅವರು ಪುಝಲ್ ಜೈಲಿನಲ್ಲಿದ್ದರು.

ಗುಂಡಿಕ್ಕಿ ಮಾಜಿ ಸೈನಿಕನ ಹತ್ಯೆ, ಹಂತಕರನ್ನು ಹೊಡೆದು ಕೊಂದ ಗುಂಪು

ರೋಹ್ತಾಸ್, ನ.16- ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಮಾಜಿ ಸೈನಿಕನನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಗುಂಪೊಂದು ಹೊಡೆದು ಕೊಂದಿದೆ. ಮೂರನೇ ಆಪಾದಿತ ದಾಳಿಕೋರನನ್ನು ಸಹ ತೀವ್ರವಾಗಿ ಥಳಿಸಲಾಗಿದೆ, ಆತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಾಜಿ ಸೈನಿಕ ಬಿಜೇಂದ್ರ ಸಿಂಗ್ (55) ಎಂದು ಗುಂಡಿಗೆ ಬಲಿಯಾಗಿದ್ದು, ಗುಂಪಿನಿಂದ ಹತ್ಯೆಗೀಡಾದ ಇಬ್ಬರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಮೂರನೇ ದಾಳಿಕೋರನನ್ನು ಅಜೀತ್ ಕುಮಾರ್ ಎಂದು ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ 9.45ರ ಸುಮಾರಿಗೆ ಕಲ್ಯಾಣಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬೈಕ್‍ನಲ್ಲಿ ಬಂದ ಮೂವರು ಶಸ್ತ್ರಧಾರಿ ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧ ಬಿಜೇಂದ್ರರನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗುತ್ತಿದ್ದರು. ಸ್ಥಳೀಯ ನಿವಾಸಿಗಳು ಮೂವರು ದಾಳಿಕೋರರನ್ನು ಹಿಂಬಾಲಿಸಿ, ಹಿಡಿದು ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರು ಹಿಡಿದಾಗ ದಾಳಿಕೋರರು ಗ್ರಾಮಸ್ಥರ ಮೇಲೂ ಗುಂಡು ಹಾರಿಸಿದ್ದಾರೆ. ಇದರಿಂದ ಅಂಕಿತ್ ಕುಮಾರ್ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಬಿಜೇಂದ್ರ ಸಿಂಗ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು, ಶಸ್ತ್ರಸಜ್ಜಿತ ದಾಳಿಕೋರರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮಿಥಿಲೇಶ್ ಕುಮಾರ್ ಮತ್ತು ಆದಿತ್ಯ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಬಿಜೇಂದ್ರ ಸಿಂಗ್ ಹತ್ಯೆಯ ಹಿಂದಿನ ನಿಗೂಢತೆಯನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಂತರದ ಇಬ್ಬರು ವ್ಯಕ್ತಿಗಳ ಹತ್ಯೆಗೆ ಕಾರಣವಾದ ಘಟನೆಯನ್ನು ಗುಂಪು ಹತ್ಯೆ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.

ಇದು ಯುದ್ಧದ ಯುಗವಲ್ಲ, ಜಾಗತಿಕ ಕಾನೂನಿಗೆ ಭಾರತ ಬದ್ಧ : ರಾಜನಾಥ್ ಸಿಂಗ್

ಹೊಸದಿಲ್ಲಿ, ನ.16- ಚೀನಾ ದಕ್ಷಿಣ ಸಮುದ್ರದಲ್ಲಿ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಾಗತಿಕ ನಿಯಮಗಳಿಗೆ ಅನುಸಾರವಾಗಿ ನೌಕಾಯಾನ, ವಿಮಾನಯಾನ ಮತ್ತು ಅಂತಾರಾಷ್ಟ್ರೀಯ ನೀರಿನಲ್ಲಿ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯಕ್ಕೆ ಭಾರತ ಬದ್ಧವಾಗಿದೆ ಎಂದಿದ್ದಾರೆ.

ಜಕಾರ್ತಾದಲ್ಲಿ ನಡೆದ 10-ರಾಷ್ಟ್ರಗಳ ಆಸಿಯಾನ್ ಮತ್ತು ಅದರ ಕೆಲವು ಸಂವಾದ ಪಾಲುದಾರರ ಸಭೆಯಲ್ಲಿ ರಾಜನಾಥ್ ಸಿಂಗ್ ಮಾತನಾಡಿ, ಜಾಗತಿಕವಾಗಿ ನಿರಂತರ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಂಭಾಷಣೆ ಮತ್ತು ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ವಿಶ್ವಕ್ಕೆ ಭಾರತದ ಸಂದೇಶವನ್ನು ಪುನರುಚ್ಚರಿಸಿದ ಸಚಿವರು, ಇದು ಯುದ್ಧದ ಯುಗವಲ್ಲ, ನ್ಯಾವಿಗೇಷನ್, ಓವರ್‍ಫ್ಲೈಟ್ ಮತ್ತು ಅಂತರರಾಷ್ಟ್ರೀಯ ನೀರಿನಲ್ಲಿ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯದ ಸ್ವಾತಂತ್ರ್ಯಕ್ಕೆ ಭಾರತವು ಬದ್ಧವಾಗಿದೆ ಎಂದು ಹೇಳಿದರು.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

1982 ರ ಸಮುದ್ರದ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ ಸೇರಿದಂತೆ ಅಂತರರಾಷ್ಟ್ರೀಯ ಕಾನೂನುಗಳನ್ನು ಮೀರಿ ಚೀನಾ, ಹೈಡ್ರೋ ಕಾರ್ಬನ್‍ಗಳ ಬೃಹತ್ ಮೂಲವಾದ ದಕ್ಷಿಣ ಸಮುದ್ರದ ಮೇಲೆ ತನ್ನ ಸಾರ್ವಭೌಮತ್ವದ ವ್ಯಾಪಕ ಹಕ್ಕುಗಳ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿವೆ. ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಬ್ರೂನಿ ಸೇರಿದಂತೆ ಹಲವಾರು ದೇಶಗಳು ಪ್ರತಿವಾದವನ್ನು ಮಂಡಿಸಿವೆ.

ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆ ಪ್ಲಸ್ (ಎಡಿಎಂಎಂ-ಪ್ಲಸ್) ಸಭೆಯಲ್ಲಿ ತಮ್ಮ ಹೇಳಿಕೆಗಳಲ್ಲಿ, ರಕ್ಷಣಾ ಸಚಿವರು ಭಯೋತ್ಪಾದನೆಯನ್ನು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಅದನ್ನು ಎದುರಿಸಲು ಸಂಘಟಿತ ಪ್ರಯತ್ನಗಳು ಅಗತ್ಯ ಎಂದು ಕರೆ ನೀಡಿದ್ದಾರೆ.

ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

ಭಾರತ, ಚೀನಾ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳ ಪ್ರತಿನಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂಡೋನೇಷ್ಯಾ ಪ್ರಸ್ತುತ ಸಭೆಯ ಅಧ್ಯಕ್ಷತೆ ವಹಿಸಿದೆ. ವಿವಿಧ ಮಧ್ಯಸ್ಥಗಾರರ ನಡುವೆ ದೊಡ್ಡ ಒಮ್ಮತವನ್ನು ಪ್ರತಿಬಿಂಬಿಸಲು ಸಮಾಲೋಚನೆ ಮತ್ತು ಅಭಿವೃದ್ಧಿ-ಆಧಾರಿತ ಪ್ರಾದೇಶಿಕ ಭದ್ರತಾ ಉಪಕ್ರಮಗಳಿಗೆ ರಕ್ಷಣಾ ಸಚಿವರು ಕರೆ ನೀಡಿದ್ದಾರೆ.