ಬೆಂಗಳೂರು,ಮೇ 14- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಅಲ್ಲಿನ ಮತದಾರರು ಯಾವ ರೀತಿ ಪಾಠ ಕಲಿಸಿದರೋ ಅದೇ ರೀತಿ ಕರ್ನಾಟಕದಲ್ಲಿ ಇಂದಿನ ಸಿಎಂ ಸಿದ್ದರಾಮಯ್ಯನವರಿಗೂ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಎಚ್ಚರಿಸಿದ್ದಾರೆ.
ಹಿಜಾಬ್ ಬೇಕು ಎಂದು ಯಾವ ವಿದ್ಯಾರ್ಥಿಗಳೂ ಸರ್ಕಾರವನ್ನು ಕೇಳಿರಲಿಲ್ಲ. ಸರ್ಕಾರ ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಜೇನುಗೂಡಿಗೆ ಕೈ ಹಾಕಿದೆ. ಮಮತಾ ಬ್ಯಾನರ್ಜಿ ಕೂಡಾ ಇದೇ ತಂತ್ರವನ್ನು ಅನುಸರಿಸಿದ್ದರು. ಟಿಎಂಸಿ ಕಥೆ ಏನಾಯಿತೋ ಸಿದ್ದರಾಮಯ್ಯನವರ ಕಥೆಯೂ ಅದೇ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸರ್ಕಾರ ಹೊರಡಿಸಿರುವ ವಿವಾದಾತಕ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಸೋಲು ಅನುಭವಿಸುತ್ತಾರೆ. ಇದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣ ಮಾಡಲು ಹೊರಟಿದೆ. ಸರ್ಕಾರ ತನ್ನ ಆದೇಶ ವಾಪಸ್ ಪಡೆಯಬೇಕು. ಹಿಜಾಬ್ ಶಾಲೆಗಳಲ್ಲಿ ಗೊಂದಲಕ್ಕೆ ಕಾರಣ ಆಗಲಿದೆ. ಸರ್ಕಾರ ಆದೇಶ ವಾಪಸ್ ಪಡೆಯದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದರಿಂದಾಗಿ ವಿದ್ಯಾರ್ಥಿಗಳು ಧೃತಿಗೆಡಬಾರದು. ಶಾಲಾ ವಾತಾವರಣ ಹಾಳು ಮಾಡಲು ನಾವು ಬಿಡುವುದಿಲ್ಲ. ನಮ ಕ್ಷೇತ್ರ ವ್ಯಾಪ್ತಿಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಹಿಂದೆ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಅವರ ಹಿಂದೆ ಪಿಎಫ್ಐ ಚಿತಾವಣೆ ಇತ್ತು. ನಂತರ ನಮ ಸರ್ಕಾರ ಹಿಜಾಬ್ ನಿಷೇಧಿಸಿತ್ತು ಎಂದು ಹೇಳಿದರು.
ಹಿಜಾಬ್ ಬೇಕು ಎಂದು ಯಾರು ಕೇಳದಿದ್ದರೂ ಸರ್ಕಾರ ಆದೇಶ ಮಾಡಿದೆ. ಇದನ್ನು ಕೂಡಲೇ ಸರ್ಕಾರ ಆದೇಶ ವಾಪಸ್ ಪಡೆಯಬೇಕು. ವಿನಾಕಾರಣ ಇಂತಹ ಹೇರಿಕೆ ತಂದೊಡ್ಡುವ ಕೆಲಸ ಸರ್ಕಾರ ಮಾಡಿದೆ. ವಿದ್ಯಾರ್ಥಿಗಳಲ್ಲಿ ಮತೀಯ ಭಾವನೆ ಮೂಡಿಸಲು ಹೊರಟಿದೆ ಎಂದು ಆರೋಪಿಸಿದರು.
ಅದಕ್ಕೆ ತುಷ್ಟೀಕರಣವನ್ನು ಎತ್ತಿ ಹಿಡಿಯಲು ತೀರ್ಮಾನ ಮಾಡಿದೆ. ಯಾವುದೇ ಅಲ್ಪಸಂಖ್ಯಾತರು ಇವರನ್ನು ಕೇಳಿರಲಿಲ್ಲ. ಕಾಂಗ್ರೆಸ್ ಅಂತರಿಕ ಘರ್ಷಣೆಯನ್ನು ಮುಚ್ಚಿ ಹಾಕಲು ಆದೇಶ ವಾಪಸ್ ಪಡೆದಿದ್ದಾರೆ. ಸರ್ಕಾರದ ಆದೇಶವನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ಗುಡುಗಿದರು.
ಇದಕ್ಕೆ ಹೋರಾಟದ ರೂಪು ರೇಷೆ ಆಗಿಯೇ ಆಗುತ್ತದೆ. ಮತ್ತೆ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ವಹಿಸಿಕೊಂಡಿದೆ. ಮುಂದಾಗುವ ಎಲ್ಲಾ ವಿಚಾರಗಳಿಗೆ ಕಾಂಗ್ರೆಸ್ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟ ಮುಚ್ಚಲು ಬೇರೆ ಬೇರೆ ವಿಚಾರ ಮುನ್ನೆಲೆಗೆ ತರುತ್ತಿದೆ. ಬಿಜೆಪಿ ಅವಧಿಯಲ್ಲಿ ಹಿಜಾಬ್ ನಿಷೇಧ ಮಾಡಲಾಗಿತ್ತು. ನಮ್ಮ ಸರ್ಕಾರದ ಆದೇಶವನ್ನ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಈಗ ಸರ್ಕಾರ ದಾವಣಗೆರೆಯಲ್ಲಾದ ಅನುಭವದಿಂದ ಅಳುಕಿದೆ. ಮತ್ತೆ ಹಿಜಾಬ್ ತಂದು ತಾರತಮ್ಯ ಮಾಡುತ್ತಿದೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ಮಾಡಿದರು.
ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಮತ್ತು ಶಾಲಾ ಮಕ್ಕಳಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಹಿಂದಿನ ಬಿಜಪಿ ಸರ್ಕಾರ ಜಾರಿಗೆ ತಂದಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ಹಿಂಪಡೆದಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.
