Friday, May 3, 2024
Homeರಾಷ್ಟ್ರೀಯಧೋನಿಯಂತೆ ರಾಹುಲ್ ಗಾಂಧಿ ಉತ್ತಮ ಫಿನಿಶರ್: ರಾಜನಾಥ್ ಸಿಂಗ್

ಧೋನಿಯಂತೆ ರಾಹುಲ್ ಗಾಂಧಿ ಉತ್ತಮ ಫಿನಿಶರ್: ರಾಜನಾಥ್ ಸಿಂಗ್

ನವದೆಹಲಿ,ಏ.7- ಕ್ರಿಕೆಟ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಫಿನಿಶರ್ ಹೇಗೋ.. ಅದೇ ರೀತಿ ರಾಜಕಾರಣದಲ್ಲಿ ರಾಹುಲ್ ಗಾಂಧಿ ಕೂಡ ಓರ್ವ ಉತ್ತಮ ಫಿನಿಶರ್ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದ ಸಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ತಿಳಿದಿರುವಂತೆ ಕ್ರಿಕೆಟ್‍ನಲ್ಲಿ ಈಗಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿಯನ್ನು ಉತ್ತಮ ಫಿನಿಶರ್ ಎನ್ನುತ್ತಾರೆ. ಅದೇ ರೀತಿ ರಾಜಕಾರಣದಲ್ಲಿ ರಾಹುಲ್ ಗಾಂಧಿ ಕೂಡ ಓರ್ವ ಉತ್ತಮ ಫಿನಿಶರ್ ಎಂದು ಕುಹುಕವಾಡಿದರು.

ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧವಿದೆ. ಬಹುತೇಕ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ್ದವು, ಆದರೆ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರದ ಯಾವುದೇ ಸಚಿವರ ವಿರುದ್ಧ ಅಂತಹ ಆರೋಪಗಳನ್ನು ಮಾಡಲಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ಒಂದು ಕಾಲದಲ್ಲಿ ಭಾರತ್ಯದಾದ್ಯಂತ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು, ಆದರೆ ಈಗ ಅದು ದೇಶದಲ್ಲಿ ಎರಡು ಅಥವಾ ಮೂರು ಸಣ್ಣ ರಾಜ್ಯಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ ಎಂದರು.

ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಗೆ ಸಂಪೂರ್ಣ ಬೆಂಬಲ ನೀಡಿದ ಅವರು, ಇದು ದೇಶದ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಏಕಕಾಲಿಕ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಐದು ವರ್ಷಗಳಲ್ಲಿ ಎರಡು ಬಾರಿ, ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭೆಗಳು ಮತ್ತು ಲೋಕಸಭೆಗಳಿಗೆ ಒಮ್ಮೆ ಚುನಾವಣೆಗಳು ನಡೆಯಬೇಕು ಎಂದು ಹೇಳಿದರು.

ಭಾರತದ ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರ ಒತ್ತು ನೀಡಿರುವುದನ್ನು ಎತ್ತಿಹಿಡಿದ ರಾಜನಾಥ್, 2027ರ ವೇಳೆಗೆ ಭಾರತವು ವಿಶ್ವದ ಅಗ್ರ ಮೂರು ಕೆಲವು ಶ್ರೀಮಂತ ದೇಶಗಳ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಕೆಲವು ದೊಡ್ಡ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿಯುತ್ತಿವೆ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಈಗಾಗಲೇ ದೇಶವನ್ನು ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡಿದೆ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡಿತು ಮತ್ತು ಅವುಗಳನ್ನು ಭಾಗಶಃ ಈಡೇರಿಸಿದ್ದರೆ, ಭಾರತವು ಬಹಳ ಹಿಂದೆಯೇ ಪ್ರಬಲ ದೇಶವಾಗುತ್ತಿತು. ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಹತ್ತು ವರ್ಷಗಳಲ್ಲಿ ಈಡೇರಿಸಿದೆ ಎಂದು ಸಮರ್ಥಿಸಿಕೊಂಡರು. ಯುಪಿಎ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಕುರಿತು ಮಾತನಾಡಿದ ಅವರು, ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಆದರೆ ಪ್ರಚೋದನೆ ನೀಡಿದರೆ, ಅಗತ್ಯಬಿದ್ದರೆ ಗಡಿ ದಾಟುವ ಮೂಲಕವೂ ಭಾರತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ದೇಶವು ಇದನ್ನು ಈಗಾಗಲೇ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.

RELATED ARTICLES

Latest News