ನವದೆಹಲಿ,ಮಾ.1- ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವ ಬೆನ್ನಲ್ಲೇ ಶ್ರೀಲಂಕಾದ ಮುಖ್ಯ ತರಬೇತುದಾರ ಸನತ್ ಜಯಸೂರ್ಯ ಅವರು ತಮ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ್ದಾರೆ.
ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೂಪರ್ 8 ಹಂತ ತಲುಪಿದ್ದ ಅತಿಥೇಯ ಶ್ರೀಲಂಕಾ ತಂಡವು, ಈ ಹಂತದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಸೋಲು ಕಂಡು ತಮ ಪಯಣ ಮುಗಿಸಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ರನ್ ಗಳಿಂದ ತಂಡ ಸೋಲು ಕಂಡ ಬೆನ್ನಲ್ಲೇ ನಾನು ಮುಖ್ಯ ತರಬೇತುದಾರನ ಹುದ್ದೆ ತ್ಯಜಿಸಲು ಸಿದ್ಧನಿದ್ದೇನೆ. ಅದಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆಗೆ ಚರ್ಚಿಸುತ್ತೇನೆ ಎಂದು ಮಾಜಿ ನಾಯಕರೂ ಆಗಿರುವ ಸನತ್ ಜಯಸೂರ್ಯ ಹೇಳಿದ್ದಾರೆ.
ಜಯಸೂರ್ಯ ಅವರ ಗರಡಿಯಲ್ಲಿ ಶ್ರೀಲಂಕಾವು 76 ಪಂದ್ಯಗಳನ್ನು ಆಡಿದ್ದು, 34 ಪಂದ್ಯಗಳಲ್ಲಿ ಗೆಲವು ಸಾಧಿಸಿದೆ. ಅಲ್ಲದೆ ತಂಡವು ಮೂರು ಮಾದರಿ ಕ್ರಿಕೆಟ್ನ ರ್ಯಾಂಕಿಂಗ್ನಲ್ಲಿ ಉನ್ನತ ಸ್ಥಾನಕ್ಕೆ ಏರಿತ್ತು.
ಅಂದಹಾಗೆ ಸನತ್ ಜಯಸೂರ್ಯ ಅವರ ಹೆಡ್ ಕೋಚ್ ಅವಧಿ ಜೂನ್ವರೆಗೂ ಇದ್ದು, ಇದರ ನಡುವೆಯೇ ಅವರು ಈ ಹುದ್ದೆಯನ್ನು ತ್ಯಜಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ಭಾರತಕ್ಕೆ 410 ರನ್ ಗುರಿ
ಅಲೀಸಾ ಹೀಲಿ (158ರನ್) ಹಾಗೂ ಬೆತ್ಮೂನಿ (106ರನ್) ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ವನಿತೆಯರ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 410 ರನ್ಗಳ ಬೃಹತ್ ಗುರಿ ನೀಡಿದೆ.
ಈ ಗುರಿ ಹಿಂಬಾಲಿಸಿದ ಭಾರತೀಯ ವನಿತೆಯರು 10 ಓವರ್ಗಳಲ್ಲಿ 72 ರನ್ಗಳಿಗೆ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದ್ದು ಸೋಲಿನ ಸುಳಿಗೆ ಸಿಲುಕಿದೆ. ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಈ ಪಂದ್ಯವನ್ನು ಜಯಿಸಿ ಕ್ಲೀನ್ಸ್ವೀಪ್ ಮಾಡುವ ಹಂತದಲ್ಲಿದೆ.
