ಹನೂರು,ಮಾ.28- ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇಗುಲ ಹುಂಡಿ ಹಣ ಎಣಿಕೆ ನಡೆದಿದ್ದು 23 ದಿನದಲ್ಲಿ 2.34 ಕೋಟಿ ರೂ ಸಂಗ್ರಹವಾಗಿದೆ.ಸಾಲೂರು ಬೃಹನಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿರವರ ಉಪಸ್ಥಿತಿಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎಇ ರವರ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 23 ದಿನದಲ್ಲಿ 2,33,84,201.00 ಕೋಟಿ ರೂ ನಗದು ರೂಪದಲ್ಲಿ (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 21 ಗ್ರಾಂ, ಬೆಳ್ಳಿ 800 ಗ್ರಾಂ ಹುಂಡಿಯಲ್ಲಿ ದೊರೆತಿದೆ. ಇದಲ್ಲದೆ 4 ವಿದೇಶಿ ನೋಟುಗಳು 2 ಸಾವಿರ ರೂ ಮುಖ ಬೆಲೆ 3 ನೋಟುಗಳು ಸಹ ಹುಂಡಿಯಲ್ಲಿ ದೊರೆತಿದೆ.
ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂದಿರುವುದು ಯುಗಾದಿ ಜಾತ್ರೆ ಅಮಾವಾಸ್ಯೆ ಹುಣ್ಣಿಮೆ ಸರ್ಕಾರಿ ರಜೆ ದಿನಗಳು ಸರ್ಕಾರ ಶಕ್ತಿ ಯೋಜನೆ ಮಹಿಳೆಯರ ಉಚಿತ ಪ್ರಯಾಣ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದೆ.
ಮ.ಬೆಟ್ಟ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರ ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ಸ್ಥಳೀಯ ಶಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್. , ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು ಸರಗೂರು ಮಹದೇವಸ್ವಾಮಿ ಹಾಗೂ ಚಾ.ನಗರ ಜಿಲ್ಲಾಡಳಿತ ಕಛೇರಿ ಮಹೇಶ್ ಚಂದ್ರ, ಪ್ರ.ದ.ಸ ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಮರಿಸ್ವಾಮಿ ಕಾಗಲವಾಡಿ ಹಾಜರಿದ್ದರು.
