ಬೆಂಗಳೂರು,ಮೇ 17- ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹಾಗೂ ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸಲು ರೈಲ್ವೆ ಸಚಿವಾಲಯವು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ
ಟರ್ಮಿನಲ್ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹೊಸ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಯಿತು.
ಕೇಂದ್ರ ರೈಲ್ವೇ ಸಚಿವ ಆಶ್ವಿನಿ ವೈಷ್ಣವ್ ಅವರು ವರ್ಚ್ಯುವಲ್ ಮೂಲಕ ಎಕ್್ಸಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿದರು. ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಈ ನೂತನ ರೈಲು ಸೇವೆಯು ಬೆಂಗಳೂರು, ಉತ್ತರ ಕರ್ನಾಟಕ ಮತ್ತು ಮುಂಬೈ ನಡುವೆ ವ್ಯಾಪಾರ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಉದ್ಯೋಗದ ನಿಮಿತ್ತ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇದು ಮಾರ್ಗದ ಪ್ರಮುಖ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳ ನಡುವಿನ ರೈಲು ಸಂಪರ್ಕವನ್ನು ಬಲಪಡಿಸಲಿದೆ.
ಈ ರೈಲು ವಾರದಲ್ಲಿ 2 ದಿನ ಸಂಚಾರ ನಡೆಸಲಿದ್ದು, ರಾಜ್ಯದ 4 ಕಡೆ ನಿಲುಗಡೆಯಾಗಲಿದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಸಂಪರ್ಕಕ್ಕೆ ಈ ರೈಲು ಅನುಕೂಲವಾಗಲಿದೆ. ಈ ಹಿಂದೆ ಮೇ 13 ಕ್ಕೆ ಆರಂಭಿಸಲು ಉದ್ದೇಶಿಸಲಾಗಿತ್ತು. ತಾಂತ್ರಿಕ ಕಾರಣಕ್ಕೆ ಮುಂದೂಡಲಾಗಿತ್ತು.
ಈ ನೂತನ ಸೇವೆಯ ಆರಂಭದ ಅಂಗವಾಗಿ, ರೈಲು ಸಂಖ್ಯೆ 06557 ಎಂಬ ಉದ್ಘಾಟನಾ ವಿಶೇಷ ರೈಲು ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 10.30ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ. ಪ್ರಯಾಣದ ಹಾದಿಯಲ್ಲಿ ಈ ರೈಲು ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಲೋನಾಂಡ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ರೈಲು ಸಂಖ್ಯೆ 16553/16554 ಎಸ್ಎಂವಿಟಿ ಬೆಂಗಳೂರು- ಲೋಕಮಾನ್ಯ ತಿಲಕ್ ಟರ್ಮಿನಲ್- ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳ ನಿಯಮಿತ ಸೇವೆಗಳು ಬೆಂಗಳೂರಿನಿಂದ 23.05.2026 ರಿಂದ ಮತ್ತು ಎಲ್.ಟಿ.ಟಿ ಮುಂಬೈನಿಂದ 24.05.2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ.
ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಲ್ ಎಕ್್ಸಪ್ರೆಸ್ ಪ್ರತಿ ಶನಿವಾರ ಮತ್ತು ಮಂಗಳವಾರ ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8.35 ಗಂಟೆಗೆ ಹೊರಟು, ಮರುದಿನ (ಕ್ರಮವಾಗಿ ಭಾನುವಾರ ಮತ್ತು ಬುಧವಾರ) ರಾತ್ರಿ 8.40 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.
ಮರು ಪ್ರಯಾಣ, ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಲ್ – ಎಸ್ಎಂವಿಟಿ ಬೆಂಗಳೂರು ಎಕ್್ಸಪ್ರೆಸ್ ಪ್ರತಿ ಭಾನುವಾರ ಮತ್ತು ಬುಧವಾರ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ರಾತ್ರಿ 11.15 ಗಂಟೆಗೆ ಹೊರಟು, ಮರುದಿನ (ಸೋಮವಾರ ಮತ್ತು ಗುರುವಾರ ಕ್ರಮವಾಗಿ) ರಾತ್ರಿ 10.30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.
ಒಟ್ಟು 17 ಬೋಗಿಗಳು ; 4 ಜನರಲ್ :
ಈ ರೈಲು ಒಟ್ಟು 17 ಎಲ್.ಎಚ್.ಬಿ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಆರು ಸ್ಲೀಪರ್ ಬೋಗಿಗಳು, ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳು, ಒಂದು ದಿವ್ಯಾಂಗ ಸ್ನೇಹಿ ಬೋಗಿ ಒಳಗೊಂಡ ಲಗೇಜ್-ಕಮ್-ಬ್ರೇಕ್ ವ್ಯಾನ್ ಹಾಗೂ ಒಂದು ಲಗೇಜ್-ಕಮ್-ಜನರೇಟರ್ ಕಾರ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಒಳಗೊಂಡಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹಾಗೂ ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸಲು ರೈಲ್ವೆ ಸಚಿವಾಲಯ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹೊಸ ಎರಡು ವಾರಕ್ಕೊಮೆ ಎಕ್್ಸಪ್ರೆಸ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿತ್ತು.
ಕನ್ನಡ ಮಂಗಮಾಯ :
ಬಹುನಿರೀಕ್ಷಿತ ಮುಂಬೈ-ಬೆಂಗಳೂರು ನಡುವೆ ಸಂಚರಿಸುವ ರೈಲ್ವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡವೇ ಮಂಗಮಾಯವಾಗಿತ್ತು. ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಹಾಕಿರುವ ಫ್ಲೆಕ್್ಸನಲ್ಲಿ ಇಂಗ್ಲಿಷ್ನಲ್ಲಿ ಮಾತ್ರ ನಾಮ ಫಲಕ ಹಾಕಲಾಗಿದ್ದು, ಕರ್ನಾಟಕದ ಸಂಸದ ವಿ.ಸೋಮಣ್ಣ ಅವರೇ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರೂ ಕನ್ನಡದ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದವು.
ಕನ್ನಡದಲ್ಲಿ ಫ್ಲೆಕ್್ಸ ಹಾಕಲು ಅಡ್ಡಿಪಡಿಸಿರುವುದು ಇಲಾಖೆಯ ಹಿರಿಯ ಅಧಿಕಾರಿಗಳು ಎಂಬ ಮಾತುಗಳೂ ಕೇಳಿಬಂದಿವೆ. ರಾಜ್ಯದ ರೈಲ್ವೆ ಅಧಿಕಾರಿಗಳು ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ಫ್ಲೆಕ್್ಸಹಾಕಲು ಮುಂದಾಗಿದ್ದರು. ಆದರೆ ಹಿರಿಯ ರೈಲ್ವೇ ಅಧಿಕಾರಿಗಳು ಈ ಫ್ಲೆಕ್್ಸ ಅಳವಡಿಸಲು ಅವಕಾಶ ಕೊಡಲಿಲ್ಲ ಎಂಬ ಆರೋಪ ಕೇಳಿಬಂದಿದೆ.
