ಬೆಂಗಳೂರು,ಜು.19- ಬಿಡದಿ ಟೌನ್ಶಿಪ್ ನಿರ್ಮಾಣ ಯೋಜನೆಯು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಯೋಜನೆ ವಿರೋಧಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿರುವ ಬಿಜೆಪಿ-ಜೆಡಿಎಸ್ ಒಂದೇ ಗುರಿ ಹೊಂದಿದ್ದರೂ ಪ್ರತ್ಯೇಕ ಹೋರಾಟದ ಹಾದಿ ತುಳಿದಿರುವುದು ಪ್ರತಿಪಕ್ಷಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯವನ್ನು ಜಗಜ್ಜಾಹೀರು ಮಾಡಿದೆ.
ಸರ್ಕಾರದ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತಿರುವ ಜೆಡಿಎಸ್, ಜುಲೈ 30ರಿಂದ ಆಗಸ್ಟ್ 1 ರವರೆಗೆ ಬೃಹತ್ ಪಾದಯಾತ್ರೆಗೆ ಕರೆ ನೀಡಿದೆ. ರಾಮನಗರ ಜಿಲ್ಲೆಯ ಬೈರಮಂಗಲದಿಂದ ಆರಂಭವಾಗುವ ಈ ಪಾದಯಾತ್ರೆಯು ಫ್ರೀಡಂಪಾರ್ಕ್ ತಲುಪಲಿದೆ. ಮತ್ತೊಂದೆಡೆ ಬಿಜೆಪಿ ಕೂಡ ತನ್ನದೇ ಆದ ಶೈಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬೆಂಗಳೂರಿನಿಂದ ಬಿಡದಿಯತ್ತ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಒಗ್ಗಟ್ಟಿನ ಕೊರತೆ: ಪ್ರತಿಪಕ್ಷಗಳಲ್ಲಿ ಏಕೆ ಒಡಕು?
ಸಾಮಾನ್ಯವಾಗಿ ಇಂತಹ ಜನಾಂದೋಲನಗಳ ಸಂದರ್ಭದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ಪ್ರತಿಪಕ್ಷಗಳು ಜಂಟಿ ಹೋರಾಟ ನಡೆಸುವುದು ರೂಢಿ. ಆದರೆ ಬಿಡದಿ ಟೌನ್ಶಿಪ್ ವಿಷಯದಲ್ಲಿ ಈ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ರಾಜಕೀಯ ಅಸ್ತಿತ್ವ, ಕ್ಷೇತ್ರ ವ್ಯಾಪ್ತಿಯ ಪ್ರಭಾವ ಮತ್ತು ಸಿದ್ಧಾಂತದ ಭಿನ್ನತೆಗಳೇ ಈ ಪ್ರತ್ಯೇಕ ಹೋರಾಟಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿಪಕ್ಷಗಳ ಈ ಒಡಕು ಸರ್ಕಾರದ ಮೇಲೆ ಬೀರುವ ಒತ್ತಡವನ್ನು ತಗ್ಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಬಿಡದಿ ಟೌನ್ಶಿಪ್ ಯೋಜನೆ ಮೊದಲಿನಿಂದಲೂ ವಿವಾದದ ಕೇಂದ್ರಬಿಂದುವಾಗಿದೆ. ತಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸ್ಥಳೀಯ ರೈತರು ದೀರ್ಘಕಾಲದಿಂದ ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ಹಿಂದೆ ನಡೆದ ಅನೇಕ ಪ್ರತಿಭಟನೆಗಳು ರೈತರ ಅಸಮಾಧಾನದ ಕಟ್ಟೆ ಒಡೆದಿದ್ದವು. ಇದೀಗ ರಾಜಕೀಯ ಪಕ್ಷಗಳು ಈ ವಿಷಯವನ್ನು ತಮ ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡಿವೆಯಾದರೂ, ರೈತರ ಹಿತರಕ್ಷಣೆಯ ಬದಲು ರಾಜಕೀಯ ಲಾಭವೇ ಮುಖ್ಯವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸರ್ಕಾರವು ಅಭಿವೃದ್ಧಿಯ ನೆಪದಲ್ಲಿ ಯೋಜನೆಗಳನ್ನು ಜಾರಿಗೆ ತರಲು ಹವಣಿಸುತ್ತಿದ್ದರೆ, ಪ್ರತಿಪಕ್ಷಗಳು ರೈತರ ಪರ ನಿಲ್ಲುವ ನಾಟಕವಾಡುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್ ತನ್ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ಪಾದಯಾತ್ರೆಯನ್ನು ವೇದಿಕೆಯನ್ನಾಗಿ ಬಳಸಿಕೊಂಡರೆ, ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸುವ ತಂತ್ರಗಾರಿಕೆಯಲ್ಲಿ ತೊಡಗಿದೆ. ರಾಮನಗರ ಭಾಗದಲ್ಲಿ ತಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿವೆ.
ಆರೋಪ-ಪ್ರತ್ಯಾರೋಪ:
ಮಾಜಿ ಸಚಿವ ಚಲುವರಾಯಸ್ವಾಮಿ ಅವರು, ಸಿಎಂ ಆಗಿ ಡಿ.ಕೆ. ಶಿವಕುಮಾರ್ ಮುಂದುವರೆಯುವುದನ್ನು ತಡೆಯಲಾಗದ ವಿರೋಧ ಪಕ್ಷಗಳು, ಟೌನ್ಶಿಪ್ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿವೆ ಎಂದು ಟೀಕಿಸಿದ್ದಾರೆ.ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ತೀವ್ರ ವಿರೋಧದ ನಡುವೆಯೇ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ಜುಲೈ 15ರಂದು ನಗರಾಭಿವೃದ್ಧಿ ಇಲಾಖೆಯು ನಾಲ್ಕು ಕಂದಾಯ ಗ್ರಾಮಗಳಾದ ಬನ್ನಿಗಿರಿ, ಅರಳಾಳುಸಂದ್ರ, ಕೆ.ಜಿ.ಗೊಲ್ಲರಪಾಳ್ಯ ಮತ್ತು ಹೊಸೂರಿನ ಒಟ್ಟು ಸುಮಾರು 5,000 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಕಳೆದ 500ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ, ಅಧಿಕಾರಿಗಳ ಮೇಲಿನ ಪೊರಕೆ ದಾಳಿ ಮತ್ತು ಅಪ್ಪಿಕೋ ಚಳುವಳಿಯಂತಹ ತೀವ್ರ ಹೋರಾಟಗಳ ಹೊರತಾಗಿಯೂ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಯಾವುದೇ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ಸ್ವಇಚ್ಛೆಯಿಂದ ಭೂಮಿ ನೀಡುವವರಿಗೆ ಪರಿಹಾರ ನೀಡಲಾಗುವುದು ಮತ್ತು ರೈತರ ಅಹವಾಲುಗಳನ್ನು ಕೇಳಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ನಾನು ಈ ಯೋಜನೆಯ ಪಿತಾಮಹನಲ್ಲ, ಇದು ನನ್ನ ಕನಸಿನ ಯೋಜನೆಯೂ ಅಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿವಾದದಿಂದ ದೂರವಿರಲು ಪ್ರಯತ್ನಿಸಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆ ದಶಕಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. 2010ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಉಪನಗರ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಾರಿಗೆ ತರಲು ಜಾಗತಿಕ ಟೆಂಡರ್ ಕರೆದಿದ್ದರು. ಅಂದಿನಿಂದಲೂ ಈ ಯೋಜನೆ ವಿವಾದಗಳ ಸುಳಿಯಲ್ಲಿ ಸಿಲುಕುತ್ತಲೇ ಬಂದಿದೆ. 2025ರ ಫೆಬ್ರವರಿಯಲ್ಲಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ, ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು.
ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಕಾನೂನುಬದ್ಧವಾಗಿ ವೇಗ ಪಡೆದುಕೊಂಡಿದೆ. ಆದರೆ, ರೈತರ ಅಸಮಾಧಾನ ಮತ್ತು ಪ್ರತಿಪಕ್ಷಗಳ ಪ್ರತ್ಯೇಕ ಹೋರಾಟಗಳು ಈ ಯೋಜನೆಯ ಅನುಷ್ಠಾನಕ್ಕೆ ಎಷ್ಟರಮಟ್ಟಿಗೆ ಅಡ್ಡಿಯಾಗಲಿವೆ ಎಂಬುದು ಕಾದು ನೋಡಬೇಕಾದ ವಿಷಯ. ರಚನೆಯಾಗಲಿರುವ ತಜ್ಞರ ಸಮಿತಿ ನೀಡುವ ವರದಿಯು ಈ ಬಿಕ್ಕಟ್ಟಿಗೆ ಪರಿಹಾರ ನೀಡುತ್ತದೆಯೇ ಅಥವಾ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ದಾರಿಯಾಗುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.
ಬಿಡದಿ ಟೌನ್ಶಿಪ್ ವಿರುದ್ಧದ ಹೋರಾಟವು ಇದೀಗ ಸರ್ಕಾರದ ಬಲಪರೀಕ್ಷೆಗಿಂತ ಹೆಚ್ಚಾಗಿ, ಪ್ರತಿಪಕ್ಷಗಳ ನಡುವಿನ ಅಹಂ ಮತ್ತು ರಾಜಕೀಯ ಪಾರುಪತ್ಯದ ಕದನವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಪಾದಯಾತ್ರೆಗಳು ಎಂತಹ ತಿರುವು ಪಡೆಯಲಿವೆ ಮತ್ತು ನಿಜವಾಗಿಯೂ ರೈತರ ಧ್ವನಿಯಾಗಿ ಕೆಲಸ ಮಾಡಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
