ಬೆಂಗಳೂರು,ಏ.15- ವಿಜಯಪುರದಲ್ಲಿ ನಿನ್ನೆ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.ಒಂದು ತಂಡ ಮಹರಾಷ್ಟ್ರಕ್ಕೆ, ಮತ್ತೊಂದು ತಂಡ ಗೋವಾಕ್ಕೆ ಹೋಗಿದ್ದು, ಇನ್ನೊಂದು ತಂಡ ರಾಜ್ಯದಲ್ಲಿ ಶೋಧ ನಡೆಸುತ್ತಿದೆ.
ತಾಂಗರೂನ ದೊಡ್ಡಿಯ ನಿವಾಸಿ, ಉದ್ಯಮಿ ರಾಜು ಖಡೆ (40) ಅವರ ಚಲನವಲನಗಳ ಮೇಲೆ ಹಂತಕರು ಹಲವು ದಿನಗಳಿಂದ ಕಣ್ಣಿಟ್ಟಿದ್ದರು. ಅವರು ಜೀಪಿನಲ್ಲಿ ವಿಜಯಪುರಕ್ಕೆ ಬರುತ್ತಿರುವ ವಿಷಯ ತಿಳಿದು ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಹೊರವಲಯದ ಅಲಿಯಾಬಾದ್ ಬಳಿ ದುಷ್ಕರ್ಮಿಗಳು ಹೊಂಚು ಹಾಕಿದ್ದಾರೆ.
ಈ ಜೀಪು ಬರುತ್ತಿದ್ದಂತೆ ಹಂತಕರು ಟಿಪ್ಪರ್ ವಾಹನದಲ್ಲಿ ಮುಖಾಮುಖಿ ಡಿಕ್ಕಿ ಮಾಡಿ ನಂತರ ಏಕಾಏಕಿ ಜೀಪಿನ ಮೇಲೆ ದಾಳಿ ನಡೆಸಿ ಬಾಗಿಲು ತೆರೆದುಕೊಳ್ಳದಂತೆ ಕಲ್ಲುಗಳನ್ನು ಎತ್ತಿಹಾಕಿ, ರಾಜು ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಳೆ ವೈಷಮ್ಯದಿಂದ ಈ ಭೀಕರ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆರೋಪಿಗಳ ಬಂಧನದ ನಂತರವಷ್ಟೇ ಉದ್ಯಮಿ ಕೊಲೆಗೆ ನಿಖರ ಕಾರಣವೇನು ಎಂಬುವುದು ಗೊತ್ತಾಗಲಿದೆ.ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
