ಚಿತ್ರದುರ್ಗ,ಮೇ. 29-ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಗರಸಭೆ ಮಾಜಿ ಸದಸ್ಯ ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 158 ರಲ್ಲಿ ಸಂಭವಿಸಿದೆ.
ಮೃತರನ್ನು ಚಳ್ಳಕೆರೆಯ ಛಾಯಾಗ್ರಾಹಕ ರಾಘವೇಂದ್ರ(40), ನಗರಸಭೆ ಮಾಜಿ ಸದಸ್ಯ ಪ್ರಮೋದ್ (35), ರುದ್ರೇಶ್(36), ಸೋಮು(35) ಹಾಗೂ ಮಲ್ಲಿಕಾರ್ಜುನ (52) ಎಂದು ಗುರುತಿಸಲಾಗಿದೆ.
ಬಳ್ಳಾರಿ ಕಡೆಯಿಂದ ಚಳ್ಳಕೆರೆಗೆ ಕಾರಿನಲ್ಲಿ ಈ ಐದು ಮಂದಿ ರಾತ್ರಿ 10.30 ರಲ್ಲಿ ಬರುತ್ತಿದ್ದ ವೇಳೆ ಮೊಳಕಾಲೂರು ತಾಲೂಕಿನ ಬೀದರ್ -ಶ್ರೀರಂಗಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 158ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಆಪ್ತ ಸ್ನೇಹಿತರಾಗಿದ್ದ ಇವರು ಸಾವಿನಲ್ಲೂ ಒಂದಾಗಿರುವುದು ಕುಟುಂಬಸ್ಥರಲ್ಲಿ ಅತ್ಯಂತ ನೋವನ್ನುಂಟು ಮಾಡಿದೆ.
ಅಲ್ಲದೆ,ರಸ್ತೆ ಬದಿಯಲ್ಲಿ ಸಾಲಾಗಿ ಮಲಗಿಸಿದ್ದ ಮೃತದೇಹಗಳ ದೃಶ್ಯ ಕಂಡು ನೆರೆದಿದ್ದ ಸ್ಥಳೀಯರನ್ನು ಮಮಲು ಮರುಗುವಂತೆ ಮಾಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಮೊಳಕಾಲೂರು ಠಾಣೆ ಪಿಎಸ್ಐ ಮಹೇಶ್ ಹೊಸಪೇಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೊಳಕಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆ ರಾತ್ರಿ ಇದೇ ರಾಷ್ಟ್ರೀಯ ಹೆದ್ದಾರಿ 158 ರ ಬೈರಾಪುರ ಕ್ರಾಸ್ ಬಳಿ ಕೇವಲ 10 ಕಿ.ಮೀ ವ್ಯಾಪ್ತಿಯಲ್ಲಿ ಲಾರಿ ಮತ್ತು ಬೋಲೆರೋ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದರು.ಈ ಘಟನೆ ಮಾಸುವ ಮುನ್ನವೇ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿರುವುದು ದುರ್ದೈವ.
