Thursday, April 16, 2026
Homeರಾಜ್ಯಸದ್ಯದಲ್ಲೇ ರಾಜ್ಯದ ಜನರಿಗೆ ಕರೆಂಟ್ ಶಾಕ್‌ 'ಗ್ಯಾರಂಟಿ' ..!

ಸದ್ಯದಲ್ಲೇ ರಾಜ್ಯದ ಜನರಿಗೆ ಕರೆಂಟ್ ಶಾಕ್‌ ‘ಗ್ಯಾರಂಟಿ’ ..!

Electricity tariff hike soon

ಬೆಂಗಳೂರು,ಫೆ.6- ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗಿ ಹೈರಾಣಾಗಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಶೀಘ್ರವೇ ವಿದ್ಯುತ್‌ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ರಾಜ್ಯದ ವಿದ್ಯುತ್‌ ಪೂರೈಕೆ ಮಾಡುವ ಬಹುತೇಕ ಕಂಪನಿಗಳು ನಷ್ಟದ ಹಳಿಯಲ್ಲಿದ್ದು, ಆದಾಯ ಸರಿದೂಗಿಸಲು ವಿದ್ಯುತ್‌ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್‌ಗೆ 1 ರೂಪಾಯಿಯಂತೆ ವಿದ್ಯುತ್‌ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಏಪ್ರಿಲ್‌ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಮೇಲೆ ಪರಿಣಾಮ ಬೀರಬಹುದು. ಕರ್ನಾಟಕದಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು 4,900 ಕೋಟಿಗೂ ಹೆಚ್ಚು ಆದಾಯದ ಕೊರತೆಯನ್ನು ಸರಿದೂಗಿಸಲು 2026ರ ಏಪ್ರಿಲ್‌‍ನಿಂದ ವಿದ್ಯುತ್‌ ದರವನ್ನು ಮತ್ತೆ ಪರಿಷ್ಕರಿಸುವ (ಹೆಚ್ಚಿಸುವ) ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಹೆಚ್ಚಳವು ಪ್ರತಿ ಯೂನಿಟ್‌‍ಗೆ 8-10 ಪೈಸೆಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಎಸ್ಕಾಂಗಳ ಆದಾಯದ ಕೊರತೆಯನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಲಾಗಿದೆ. 2025 ರ ಮಾರ್ಚ್‌ನಲ್ಲಿ, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌‍ಗೆ 36 ಪೈಸೆಯಷ್ಟು ವಿದ್ಯುತ್‌ ದರವನ್ನು ಹೆಚ್ಚಿಸಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್‌ ದರವನ್ನು ಹೆಚ್ಚಿಸುವ ಮೂಲಕ ತಮ 4,620 ಕೋಟಿ ರೂಪಾಯಿಗಳ ಆದಾಯದ ಅಂತರವನ್ನು ಸರಿದೂಗಿಸಲು ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವನ್ನು ಕೋರಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ದರ ಪರಿಷ್ಕರಣೆ ಮಾಡಿದಾಗ ಕೆಇಆರ್‌ಸಿ ಅಂದಾಜು ಮಾಡಿದ್ದ ಲೆಕ್ಕಾಚಾರದಲ್ಲಿ ವೆಚ್ಚ ಹೆಚ್ಚಾಗಿದ್ದರೆ, ಆದಾಯದಲ್ಲಿ ಖೋತಾ ಆಗಿದೆ. ಇದರ ನಡುವೆ ಸಮತೋಲನ ಕಾಪಾಡಲು ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿವೆ.

ವಿದ್ಯುತ್‌ ಖರೀದಿ, ಬಡ್ಡಿ ಪಾವತಿ ಮತ್ತು ಹಣಕಾಸು ವೆಚ್ಚ, ಕಾರ್ಯಾಚರಣೆ ಮತ್ತು ನಿರ್ವಹಣೆ ಇತ್ಯಾದಿಗಳಿಗೆ ಕೆಇಆರ್‌ಸಿ ಅಂದಾಜಿಸಿದ್ದಕ್ಕಿಂತ ಅಧಿಕ ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಅತಿ ಹೆಚ್ಚು, ಅಂದರೆ 2,802.82 ಕೋಟಿ ಖೋತಾ ಆಗಿದೆ. ಉಳಿದೆಲ್ಲ ಎಸ್ಕಾಂಗಳ ಆದಾಯದಲ್ಲೂ ಎರಡು ಸಾವಿರ ಕೋಟಿಗೂ ಅಧಿಕ ಖೋತಾ ಆಗಿದೆ. ದರ ಪರಿಷ್ಕರಣೆ ಮಾಡದಿದ್ದರೆ ಕಂಪನಿಗಳ ನಿರ್ವಹಣೆ ಕಷ್ಟವಾಗಲಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ.

2025ರ ಮಾರ್ಚ್‌ನಲ್ಲಿ ದರ ಪರಿಷ್ಕರಣೆ ಮಾಡಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕೋರಿ ಎಸ್ಕಾಂಗಳು ಕೆಇಆರ್‌ಸಿಗೆ ಪ್ರತ್ಯೇಕ ಅರ್ಜಿಯನ್ನು ಈಗಾಗಲೇ ಸಲ್ಲಿಸಿವೆ. ಇದನ್ನು ವಿಚಾರಣೆಗೆ ಅಂಗೀಕರಿಸಿದ್ದು, ಸದ್ಯದಲ್ಲೇ ಸಾರ್ವಜನಿಕವಾಗಿ ಅಹವಾಲುಗಳನ್ನು ಆಲಿಸಿ, ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನಿಗದಿಪಡಿಸಿರುವ ವಿದ್ಯುತ್‌ ದರವನ್ನು ಜಾಸ್ತಿ ಮಾಡಿ, ರೈತರ ಕೃಷಿ ಪಂಪ್‌ಸೆಟ್‌‍ಗಳಿಗೆ ನಿಗದಿಪಡಿಸಿರುವ ದರವನ್ನು ಕಡಿಮೆ ಮಾಡಬೇಕು ಎಂಬುದು ಎಸ್ಕಾಂಗಳ ಬೇಡಿಕೆಯಾಗಿದೆ.

ಏಕೆ ಈ ಬೇಡಿಕೆ? :
ಕೃಷಿ ಪಂಪ್‌ಸೆಟ್‌‍ಗಳಿಗೆ ಪೂರೈಸುವ ಪ್ರತಿ ಯೂನಿಟ್‌ ವಿದ್ಯುತ್‌‍ಗೆ 6.80 ಇದ್ದ ದರವನ್ನು ಆಯೋಗವು 8.25ಕ್ಕೆ ಹೆಚ್ಚಿಸಿತ್ತು. ಪಂಪ್‌‍ಸೆಟ್‌‍ಗಳಿಗೆ ಉಚಿತವಾಗಿ ವಿದ್ಯುತ್‌ ನೀಡುವ ಕಾರಣ, ಇದರ ವೆಚ್ಚವನ್ನು ಸಹಾಯಧನದ ರೂಪದಲ್ಲಿ ಸರ್ಕಾರ ಎಸ್ಕಾಂಗಳಿಗೆ ತುಂಬಿಕೊಡಬೇಕು.

ಕಳೆದ ವರ್ಷ ದರ ಪರಿಷ್ಕರಣೆ ಆಗುವ ಮುನ್ನ ಸರ್ಕಾರ ಸುಮಾರು 18 ಸಾವಿರ ಕೋಟಿ ಸಹಾಯಧನವನ್ನು ನೀಡುತ್ತಿತ್ತು. ಪರಿಷ್ಕರಣೆ ನಂತರ ಇದು ಸುಮಾರು 21 ಸಾವಿರ ಕೋಟಿಗೆ ಹೆಚ್ಚಾಗಿದೆ. ಇಷ್ಟೊಂದು ಹಣವನ್ನು ಸಹಾಯಧನದ ರೂಪದಲ್ಲಿ ನೀಡುವುದು ಕಷ್ಟ ಎಂಬ ಕಾರಣಕ್ಕಾಗಿ ಸರ್ಕಾರದ ಸೂಚನೆಯಂತೆ ಎಸ್ಕಾಂಗಳು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿವೆ.

ಪಂಪ್‌ಸೆಟ್‌‍ಗಳಿಗೆ ಪೂರೈಕೆಯಾಗುವ ವಿದ್ಯುತ್‌ ದರವನ್ನು ಕಡಿಮೆ ಮಾಡಿ, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಇತ್ಯಾದಿಗಳಿಗೆ ಪೂರೈಸುವ ವಿದ್ಯುತ್‌ ದರವನ್ನು ಹೆಚ್ಚಿಸಬೇಕು ಎಂದು ಕೋರಲಾಗಿದೆ. ಇದನ್ನು ಕೆಇಆರ್‌ಸಿ ಒಪ್ಪಿದರೆ, ಸರ್ಕಾರಕ್ಕೆ ಸಹಾಯಧನದ ರೂಪದಲ್ಲಿ ನೀಡುವ ಹಣ ಸ್ವಲ್ಪಮಟ್ಟಿಗೆ ಉಳಿಯಲಿದೆ. ಆದರೆ, ಕೈಗಾರಿಕೆಗಳು, ಕಾರ್ಖಾನೆಗಳಿಗೆ ಹೊರೆಯಾಗಲಿದೆ.

RELATED ARTICLES

Latest News