ಬೆಂಗಳೂರು,ಮೇ 12- ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಆಗಮಿಸಿದ ವೇಳೆ ಉಂಟಾಗಿರುವ ಭದ್ರತಾ ವೈಫಲ್ಯ ಕುರಿತು ರಾಜ್ಯಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಶ್ರೀರಾಮಲು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಂತಹ ಗಣ್ಯವ್ಯಕ್ತಿಗಳು ಆಗಮಿಸಿದ ವೇಳೆ ಉನ್ನತ ಮಟ್ಟದ ಭದ್ರತೆಯನ್ನು ನೀಡಬೇಕು. ಇದು ರಾಜ್ಯಸರ್ಕಾರದ ಕರ್ತವ್ಯವೂ ಹೌದು. ಜಿಲೆಟಿನ್ ಕಡ್ಡಿ ಪತ್ತೆಯಾಗಿರುವುದು ಸಾಮಾನ್ಯ ಪ್ರಕರಣವಲ್ಲ. ತಕ್ಷಣವೇ ರಾಜ್ಯಸರ್ಕಾರ ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪವಾಗಿದ್ದು, ಪ್ರದಾನಿಗಳಿಗೆ ವಿಶೇಷ ಭದ್ರತೆಯನ್ನು ಇಡೀ ದೇಶ ಕೊಡುತ್ತದೆ. ರಾಜ್ಯಕ್ಕೆ ಬಂದಾಗ ಇಂತಹ ಭದ್ರತಾ ಲೋಪ ಸರಿಯಲ್ಲ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್ ಅವರು ಮೋದಿಯವರನ್ನು ದೇಶದ ಪ್ರದಾನಿ ಅಂದುಕೊಂಡಿಲ್ಲ ಎಂದು ಆಕ್ಷೇಪಿಸಿದರು.
ಭದ್ರತೆ ಕೊಡುವುದಕ್ಕೆ ಗಮನ ಹರಿಸುವ ಬದಲು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಭದ್ರತೆಗಿಂತ ವರ್ಗಾವಣೆ ಮುಖ್ಯವೇ? ಇಲ್ಲವೇ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎನ್ನುವುದಕ್ಕೆ ಸಿಟ್ಟಾ? ಎಂದು ಪ್ರಶ್ನಿಸಿದರು.
ಮುಂದಿನ ಒಂದು ವರ್ಷಗಳ ಕಾಲ ದೇಶದ ಜನರು ಬಂಗಾರ ಖರೀದಿ ಮಾಡಬಾರದು ಎಂಬ ನರೇಂದ್ರ ಮೋದಿಯವರ ಹೇಳಿಕೆಯಲ್ಲಿ ಜನಪರವಾದ ಕಾಳಜಿ ಇದೆ. ಅನಗತ್ಯ ಬಳಕೆ ಬೇಡ ಎಂದಷ್ಟೇ ಹೇಳಿದ್ದಾರೆ. ನಮಗೆ ಭವಿಷ್ಯದಲ್ಲಿ ತೊಂದರೆ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ಮಾತನ್ನು ಹೇಳಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.
ಜನರು ಇತಿ ಮಿತಿಯಲ್ಲಿ ಖರ್ಚು ಮಾಡಬೇಕು ಎನ್ನುವುದು ಅದರ ಅರ್ಥವಾಗಿದೆ. ಯುದ್ದದ ವಿಚಾರ ಇದ್ದಾಗ ಜನ ಹೇಗೆ ನಡೆದುಕೊಳ್ಳಬೇಕು, ಅದರ ಪರಿಣಾಮ ಏನು ಎನ್ನುವುದನ್ನು ಪ್ರಧಾನಮಂತ್ರಿ ಹೇಳಿದ್ದಾರೆ ಅಷ್ಟೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಪರಿಸ್ಥಿತಿ ಬಗ್ಗೆ ಅರ್ಥ ಮಾಡ್ಕೊಳಬೇಕು ಎಂದು ಶ್ರೀರಾಮಲು ಮನವಿ ಮಾಡಿದರು.
