ಬೆಂಗಳೂರು, ಮಾ.2- ನಾಳೆ ಗೋಚರಿಸಲಿರುವ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜಾ ಸಮಯ ಬದಲಾವಣೆಯಾಗಲಿದೆ.ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಗೋಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆ ಹಾಗೂ ಪ್ರಸಾದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಪುನಸ್ಕಾರಗಳು, ಜಲಾಭಿಷೇಕ, ವಿಶೇಷ ಪೂಜೆ ನೆರವೇರಿದ ಬಳಿಕ 9 ಗಂಟೆಗೆ ದೇವಾಲಯನ್ನು ಬಂದ್ ಮಾಡಲಾಗುತ್ತದೆ. ಸಂಜೆ 7.30 ಗೆ ದೇವಸ್ಥಾನದ ಬಾಗಿಲನ್ನು ತೆರೆದು ಮತ್ತೆ ಪೂಜೆ ನೆರವೇರಿಸಲಾಗುವುದು.
ಬುಧವಾರ ಬೆಳಿಗ್ಗೆ ದೇವಾಲಯವನ್ನು ಶುಚಿಗೊಳಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.ಅದೇ ರೀತಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ದರ್ಶನ ಹಾಗೂ ಭೋಜನಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ ಮತ್ತೆ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ ಪ್ರಸಾದ 12 ಗಂಟೆವರೆಗೆ ಲಭ್ಯವಿರುತ್ತದೆ. ಗ್ರಹಣ ಮುಕ್ತಾಯವಾದ ನಂತರ ಭೋಜನಾ ವ್ಯವಸ್ಥೆ ಇರಲಿದೆ.
