ಚಿಕ್ಕಮಗಳೂರು,ಮಾ.26- ಒಂದಲ್ಲ, ಎರಡಲ್ಲ ಬರೋಬ್ಬರಿ 15ಕ್ಕೂ ಹೆಚ್ಚು ಕಾಡಾನೆಗಳು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿವೆ. ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಆತಂಕ ಮನೆ ಮಾಡಿದೆ.
ಬೇಲೂರು ಮಾರ್ಗವಾಗಿ ಬಂದಿರುವ ಕಾಡಾನೆಗಳು ಸಕ್ರೆಬೈಲು, ಚಟ್ಟನಹಳ್ಳಿ, ಹುಲಿಹಂಡ್ಲು ಸೇರಿದಂತೆ ಹಲವೆಡೆ ಸಂಚಾರ ಮಾಡುತ್ತಿದ್ದು, ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.
ಹಿಂಡು ಹಿಂಡಾಗಿ ರಸ್ತೆ ದಾಟುತ್ತಿದ್ದ ವಿಡಿಯೋ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ತೋಟ, ಜಮೀನು ಹಾಗೂ ಗ್ರಾಮಗಳಲ್ಲಿ ಓಡಾಡಲು ಗ್ರಾಮಸ್ಥರು ಭಯಪಡುವಂತಾಗಿದೆ.
ಹಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಡಾನೆಗಳು ಮತ್ತೆ ಪ್ರತ್ಯಕ್ಷವಾಗಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ಕಾಡಿನಲ್ಲಿ ಆಹಾರ, ನೀರು ಸಿಗದೆ ನಾಡಿನತ್ತ ನುಗ್ಗುತ್ತಿವೆ. ಅನಾಹುತ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಕ್ರಮ ಕೈಗೊಂಡು ಕಾಡಾನೆಗಳನ್ನು ಅರಣ್ಯದತ್ತ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
