ಬೆಂಗಳೂರು,ಜ.20- ಮಹಿಳೆಯರೊಂದಿಗೆ ಚಕ್ಕಂದವಾಡುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತುಗೊಳಿಸಿದೆ.
ತಮ ಕಚೇರಿಯಂತೆ ಕಾಣುವ ಸ್ಥಳದಲ್ಲಿ ಮಹಿಳೆಯರಿಗೆ ಚುಂಬಿಸುವುದು ಸೇರಿ ಕೆಲವು ಅಶ್ಲೀಲ ಆಡಿಯೋ ತುಣುಕುಗಳು ಸಹ ಕಾಣಿಸಿಕೊಂಡಿವೆ, ಅದರಲ್ಲಿ ರಾಮಚಂದ್ರರಾವ್ ಮಹಿಳೆಯರೊಂದಿಗೆ ಮಾತನಾಡುತ್ತಿರುವುದು ಕೇಳಿಬಂದಿದೆ.
ಇದು ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು ಮತ್ತು ಸಿಎಂ ಸಿದ್ದರಾಮಯ್ಯ ಅವರು ಕೂಡ ಕಠಿಣ ಕ್ರಮದ ಸೂಚನೆ ನೀಡಿದ್ದರು.ಇದರ ಬೆನ್ನಲ್ಲೇ ನಡವಳಿಕೆಯು ನಿಯಮಗಳನ್ನು ಉಲ್ಲಂಘಿಸಿದೆ ಎಂಬುವುದು ದೃಢಪಟ್ಟಿದೆ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕ ಡಾ. ಕೆ. ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯ ಸರ್ಕಾರವು ತಾತ್ಕಾಲಿಕ ಕ್ರಮ ಕೈಗೊಂಡಿದೆ. ಇಲಾಖಾ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.
ಈ ನಡುವೆ ರಾಮಚಂದ್ರರಾವ್ ವಿಡಿಯೋಗಳನ್ನು ಕಲ್ಪಿತ (ಎಐ) ಮತ್ತು ಸುಳ್ಳು ಎಂದು ಸಂಪೂರ್ಣವಾಗಿ ತಿರಸ್ಕರಿಸಲು ಪ್ರಯತ್ನಿಸಿದರು.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇಂದು ಹೊರಡಿಸಿದ ಅಧಿಕೃತ ಆದೇಶದಲ್ಲಿ, ದೃಶ್ಯಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ವಿಡಿಯೋಗಳು ಮತ್ತು ಸುದ್ದಿ ವರದಿಗಳು ಹಿರಿಯ ಐಪಿಎಸ್ ಅಧಿಕಾರಿ ಅಶ್ಲೀಲ ರೀತಿಯಲ್ಲಿ ವರ್ತಿಸುತ್ತಿರುವುದನ್ನು ತೋರಿಸಿವೆ ಎಂದು ಸರ್ಕಾರ ಹೇಳಿದೆ.
ಸರ್ಕಾರಿ ಸೇವಕರಿಗೆ ಯೋಗ್ಯವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಮತ್ತು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆಂದು ಗಮನಿಸಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಈ ವಿಷಯವನ್ನು ಪರಿಶೀಲಿಸಿದೆ, ಅಧಿಕಾರಿಯ ನಡವಳಿಕೆಯು 1968 ರ ಅಖಿಲ ಭಾರತ ಸೇವೆಗಳ (ನಡವಳಿಕೆ) ನಿಯಮಗಳ ನಿಯಮ -3 ರ ಉಲ್ಲಂಘನೆಯಾಗಿದೆ ಎಂದು ಕಂಡುಬಂದಿದೆ ಎಂದು ಹೇಳಿದೆ.
ಅಮಾನತು ಅವಧಿಯಲ್ಲಿ ರಾಮಚಂದ್ರರಾವ್ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ. ಆದೇಶವು ಅವರ ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ. ಈ ನಡುವೆ ಕನ್ನಡ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್, ಉದ್ಯಮಿ ತರುಣ್ ರಾಜು ಮತ್ತು ಆಭರಣ ವ್ಯಾಪಾರಿ ಸಾಹಿಲ್ ಜೈನ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.ಈ ಪ್ರಕರಣದಲ್ಲೂ ರಾಮಚಂದ್ರರಾವ್ ವಿಚಾರಣೆ ಎದುರಿಸಿದ್ದರು.
