ಜಲವಾರ(ರಾಜಸ್ಥಾನ), ಮಾ.24- ಪೊಲೀಸ್ ಠಾಣೆಗೆ ದೂರು ಕೊಡಲು ಹೊರಟ ಐವರ ಮೇಲೆ ಡಂಪರ್ ಟ್ರಕ್ ಹರಿಸಿ ಭೀಕರವಾಗಿ ಹತ್ಯೆಗೈದ ಘಟನೆ ಜಲವಾರ ಜಿಲ್ಲೆಯ ಪಗಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ.
ಯಾವುದೋ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಿನ್ನೆ ರಾತ್ರಿ ಜಗಳ ನಡೆದಿದೆ. ನಂತರ ಐವರು ಪಗಾರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿ ಹೊರಟಿದ್ದರು. ಇದರಿಂದ ರೊಚ್ಚಗೆದ್ದ ಇನ್ನೊಂದು ಗುಂಪಿನವರು ಡಂಪರ್ ಟ್ರಕನ್ನು ಮತ್ತೊಂದು ಗುಂಪಿನ ಮೇಲೆ ಹರಿಸಿ ಐವರನ್ನು ಹತ್ಯೆ ಮಾಡಿದೆ. ಹತ್ಯೆಯಾದವರಲ್ಲಿ ಇಬ್ಬರು ಸಹೋದರರು ಸೇರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಭವಾನಿ ಮಂಡಿ ಡಿಎಸ್ಪಿ ಪ್ರೇಮ್ ಚೌಧರಿ ಅವರು ಗ್ರಾಮದಲ್ಲಿ ಕಾನೂನು ಸುಸ್ವವಸ್ಥೆ ಕಾಪಾಡಲು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಈಗಾಗಿ ಪಕ್ಕದ ರಾಜ್ಯಗಳಿಗೂ ಪೊಲೀಸ್ ತಂಡಗಳನ್ನು ಕಳುಹಿಸಿಲಾಗಿದೆ ಎಂದು ಅವರು ಹೇಳಿದರು.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚುವರಿ ಎಸ್ಪಿ ಚಿರಂಜಿಲಾಲ್ ಮೀನಾ ನೇತೃತ್ವದಲ್ಲಿ ಪೊಲೀಸ್ ತಂಡಗಳು ವಿವಿಧೆಡೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿವೆ.