ಚಿಕ್ಕಮಗಳೂರು,ಜು.9- ಜಿಲ್ಲೆಯಲ್ಲಿ ಮಳೆ ಗಾಳಿ ಆರ್ಭಟ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬೃಹತ್ ಬಂಡೆ ಹಾಗೂ ಮರ ರಸ್ತೆ ಮೇಲೆ ಉರುಳಿಬಿದ್ದ ಪರಿಣಾಮ ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಮಳೆ ಮಧ್ಯೆ ಪ್ರಯಾಣಿಕರು ಹಾಗೂ ಪ್ರವಾಸಿಗರು ಸಿಲುಕಿ ಪರದಾಡುವಂತಾಯಿತು.
ಬಂಡೆ ರಸ್ತೆ ಮೇಲೆ ಉರುಳಿಬೀಳುವ ಕೆಲವೇ ಕ್ಷಣಗಳ ಮೊದಲು ಪ್ರವಾಸಿ ಕಾರೊಂದು ಆ ಸ್ಥಳವನ್ನು ದಾಟಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಾರ್ಮಾಡಿ ಘಾಟಿಯ ವಿವಿಧೆಡೆ ಮಳೆಯ ಪರಿಣಾಮ ಧರೆ ಕುಸಿತ, ಬಂಡೆಗಳು ಜಾರುವುದು ಹಾಗೂ ಮರಗಳು ಮುರಿದು ಬೀಳುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಸಮಾಜಸೇವಕ ಆರೀಫ್ ಹಾಗೂ ಸ್ಥಳೀಯರು ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ ಬಳಿಕ ವಾಹನ ಸಂಚಾರ ಪುನರಾರಂಭವಾಯಿತು.ಚಾರ್ಮಾಡಿ ಘಾಟಿ ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಜೀವನಾಡಿಯಾಗಿದ್ದು, ಪ್ರತಿದಿನ ನೂರಾರು ವಾಹನಗಳು, ಸರ್ಕಾರಿ ಮತ್ತು ಖಾಸಗಿ ಬಸ್ಗಳು, ಆಂಬುಲೆನ್್ಸಗಳು ಹಾಗೂ ತರಕಾರಿ ಸಾಗಣೆ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.
ಕೇವಲ ಅರ್ಧ ಗಂಟೆ ಸಂಚಾರ ಸ್ಥಗಿತಗೊಂಡರೂ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಹವಾಮಾನ ಇಲಾಖೆ ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಮತ್ತು ಮರಗಳು ಬೀಳುವ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಅತೀವ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
