ಬೆಂಗಳೂರು,ಜು.12- ಪಾರ್ಕ್ನಲ್ಲಿ ಮದ್ಯದ ಪಾರ್ಟಿ ಮಾಡಿದ ದುಷ್ಕರ್ಮಿಗಳು ತಮ್ಮ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ರಾತ್ರಿ ಕೆ.ಎಸ್. ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜ್ಯೋತ್ಸವನಗರದ ನಿವಾಸಿ ರಾಕೇಶ್ ಅಲಿಯಾಸ್ ರಾಕಿ(19) ಕೊಲೆಯಾದ ಯುವಕ.
ಈತ ಫುಟ್ಪಾತ್ನಲ್ಲಿನ ಫುಡ್ ವ್ಯಾಪಾರಿ ಬಳಿ ಎಗ್ ರೈಸ್ ಹಾಕುವ ಕೆಲಸ ಮಾಡುತ್ತಿದ್ದ.ನಿನ್ನೆ ಕೆಲಸ ಮುಗಿದ ನಂತರ ತನ್ನ ಸ್ನೇಹಿತರ ಜೊತೆ ಮನೆಗೆ ಸಮೀಪ ಇರುವ ಬಿಬಿಎಂಪಿಯ ಉದ್ಯಾನವನದಲ್ಲಿ ಮದ್ಯದ ಪಾರ್ಟಿ ಮಾಡಿದ್ದಾನೆ.
ಆ ಸಂದರ್ಭದಲ್ಲಿ ಅವರಲ್ಲೇ ಜಗಳ ಉಂಟಾಗಿ ದುಷ್ಕರ್ಮಿಗಳು ರಾಕೇಶ್ ಕಣ್ಣುಗಳಿಗೆ ಮುಷ್ಠಿಯಿಂದ ಗುದ್ದಿ , ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮುಂಜಾನೆ ಆ ಪಾರ್ಕ್ಗೆ ವಾಯುವಿಹಾರಕ್ಕೆ ಬಂದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
