ಬೆಂಗಳೂರು,ಆ.3-ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ತನ್ನ ಮೊಬೈನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದ ಸಾಫ್ಟ್ ವೇರ್ ಎಂಜಿನಿಯರ್ ಇದೀಗ ಬೇಗೂರು ಪೊಲೀಸರ ಅತಿಥಿಯಾಗಿದ್ದಾನೆ.ಕಳೆದ ಐದು ವರ್ಷಗಳಿಂದ ಬೇಗೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುವ ಟೆಕ್ಕಿ ಮಂಜುನಾಥನ ಕರಾಳ ಮುಖ ಬಯಲಾಗಿದೆ.
ಜು.27 ರಂದು ಮನೆ ಮಾಲಕಿ ಸ್ನಾನದ ಕೊಠಡಿಯಲ್ಲಿದ್ದಾಗಆರೋಪಿ ಮಂಜುನಾಥ ಕಿಟಕಿ ಬಳಿ ಹೋಗಿ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದನು.ಮಾಲಕಿ ತಕ್ಷಣ ಗಮನಿಸಿ ಕೂಗಿಕೊಂಡಾಗ ಸ್ಥಳದಿಂದ ಆತ ಪರಾರಿಯಾಗಿದ್ದನು. ಬಳಿಕ ಪಕ್ಕದ ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಮಾಲಕಿ ಪರಿಶೀಲಿಸಿದಾಗ ತನ್ನ ಮನೆಯಲ್ಲಿ ಬಾಡಿಗೆಗಿರುವ ಮಂಜುನಾಥ ಓಡಿ ಹೋಗುತ್ತಿರುವ ದೃಶ್ಯ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಮೊಬೈಲ್ ಪರಿಶೀಲಿಸಿದಾಗ ಮಾಲಕಿ ಸ್ನಾನ ಮಾಡುತ್ತಿದ್ದ ಹಲವು ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
