ಬೆಂಗಳೂರು: ತಾಯಿಯ ಎದೆಹಾಲು ಕೇವಲ ಮಗುವಿನ ಹೊಟ್ಟೆ ತುಂಬಿಸುವ ಆಹಾರವಲ್ಲ, ಅದು ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುವ ಅಮೃತ. ತಾಯಿಯ ಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಮಗುವಿನ ಜೀವಿತಾವಧಿಯ ಆರೋಗ್ಯದ ಗುಟ್ಟನ್ನು ಬಿಚ್ಚಿಡಬಲ್ಲವು ಎಂದು ಖ್ಯಾತ ವೈದ್ಯಕೀಯ ಮತ್ತು ಪೌಷ್ಟಿಕಾಂಶ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿ ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026’ ವಾರ್ಷಿಕ ಶೃಂಗಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಮಗುವಿನ ಆರಂಭಿಕ ದಿನಗಳ ಪೌಷ್ಟಿಕಾಂಶ, ತಾಯಿಯ ಹಾಲು ಮತ್ತು ಕರುಳಿನ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ತಜ್ಞರು ಹೊಸ ವಿಚಾರಗಳನ್ನು ಹಂಚಿಕೊಂಡರು.
‘ಮೊದಲ 1000 ದಿನಗಳು’ ಏಕೆ ಅತಿ ಮುಖ್ಯ? : ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಗರ್ಭಧಾರಣೆಯಿಂದ ಹಿಡಿದು ಮಗುವಿನ ಮೊದಲ ಎರಡು ವರ್ಷಗಳ (ಅಂದರೆ ಒಟ್ಟು 1,000 ದಿನಗಳು) ಪೌಷ್ಟಿಕಾಂಶವು ಮುಂದಿನ ಇಡೀ ಜೀವನದ ಆರೋಗ್ಯಕ್ಕೆ ಬುನಾದಿ ಹಾಕುತ್ತದೆ ಎಂದು ತಜ್ಞರು ಒತ್ತಿ ಹೇಳಿದರು. ತಾಯಿಯ ಹಾಲಿನಲ್ಲಿರುವ ಎಚ್ಎಂಒ (ಹ್ಯೂಮನ್ ಮಿಲ್ಕ್ ಆಲಿಗೋಸ್ಯಾಕರೈಡ್ಸ್) ಎಂಬ ಅಂಶವು ಮಗುವಿನ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಮಗುವಿನ ಮೆದುಳಿನ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ದಯಾನಂದ ಸಾಗರ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಆಶಾ ಬೆನಕಪ್ಪ ಮಾತನಾಡಿ, “ತಾಯಿಯ ಹಾಲಿನಲ್ಲಿರುವ ಮೈಕ್ರೋಬಯೋಮ್ (ಸೂಕ್ಷ್ಮಾಣುಜೀವಿಗಳು) ಮತ್ತು ಕರುಳು ಹಾಗೂ ಮೆದುಳಿನ ನಡುವಿನ ಸಂಪರ್ಕದ ಬಗ್ಗೆ ಇದೀಗ ಹೊಸ ಸಂಶೋಧನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ತಾಯಂದಿರಿಗೆ ಕೇವಲ ಪೌಷ್ಟಿಕಾಂಶ ಮಾತ್ರವಲ್ಲದೆ, ಮಾನಸಿಕ ಬೆಂಬಲವೂ ಅಗತ್ಯ. ಕುಟುಂಬ, ಗಂಡ ಹಾಗೂ ಸಮಾಜ ತಾಯಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವುದು ಬಹಳ ಮುಖ್ಯ,” ಎಂದು ವಿವರಿಸಿದರು. ವಿಶೇಷವೆಂದರೆ, ಡಾ. ಆಶಾ ಬೆನಕಪ್ಪ ಅವರ ತಂಡವು ಪ್ರಸ್ತುತ ಜಾಗತಿಕ ಮಟ್ಟದ ‘ಹ್ಯೂಮನ್ ಮಿಲ್ಕ್ ಮೈಕ್ರೋಬಯೋಮ್’ ಸಂಶೋಧನೆಯಲ್ಲಿ ನಿರತವಾಗಿದೆ.
ಯಂತ್ರಗಳಿಗಿಂತ ವೈದ್ಯಕೀಯ ಸಲಹೆ ಮುಖ್ಯ! ಕಾರ್ಯಕ್ರಮದಲ್ಲಿ ‘ನಿಖರವಾದ ಆರೋಗ್ಯ ಮತ್ತು ವೈಯಕ್ತಿಕ ಡಯೆಟ್’ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಡಯಟೀಶಿಯನ್ ಶೀಲಾ ಕೃಷ್ಣಸ್ವಾಮಿ, ಹೆಲ್ತ್ ಕೋಚ್ ಡಾ. ನಂದಿತಾ ಅಯ್ಯರ್ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಅದಿತಿ ಪ್ರಸಾದ್ ಆಪ್ಟೆ ಭಾಗವಹಿಸಿದ್ದರು.
“ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕೇವಲ ಡೇಟಾ ಮತ್ತು ಟೆಸ್ಟ್ಗಳ ಮೇಲೆ ಅವಲಂಬಿತರಾಗುವುದು ಹೆಚ್ಚಾಗಿದೆ. ಆದರೆ, ಒಬ್ಬ ವ್ಯಕ್ತಿಯ ಡಯೆಟ್ ನಿರ್ಧರಿಸಲು ಆತನ ನಿದ್ದೆ, ದೈಹಿಕ ಚಟುವಟಿಕೆ, ಕೌಟುಂಬಿಕ ಹಿನ್ನೆಲೆ, ಆಹಾರ ಪದ್ಧತಿ ಬಹಳ ಮುಖ್ಯ. ಆ್ಯಪ್ಗಳು ಹಾಗೂ ಯಂತ್ರಗಳು ಎಂದಿಗೂ ತಜ್ಞ ವೈದ್ಯರನ್ನು ಬದಲಿಸಲು ಸಾಧ್ಯವಿಲ್ಲ,” ಎಂದು ಅವರು ಎಚ್ಚರಿಸಿದರು.
ಶೃಂಗಸಭೆಯ ಬಗ್ಗೆ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ನ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್, “ಆರೋಗ್ಯ ಸುಧಾರಿಸುವಲ್ಲಿ ಪೌಷ್ಟಿಕಾಂಶದ ಪಾತ್ರ ಬಹಳ ದೊಡ್ಡದು. ಆದರೆ ಇದರ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಜನಸಾಮಾನ್ಯರಿಗೆ ವಿಜ್ಞಾನವನ್ನು ಸರಳವಾಗಿ ಅರ್ಥೈಸುವ ಮತ್ತು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಮಾಹಿತಿಯನ್ನು ಒದಗಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ,” ಎಂದು ತಿಳಿಸಿದರು.
ಈ ಗಂಭೀರ ಚರ್ಚೆಗಳ ನಡುವೆ, ಡಾ. ಉಮೇಶ್ ವಧ್ವಾನಿ ಅವರು ‘ಡಯಟಿಂಗ್ ಕಾ ಮಜಾಕ್’ ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಡಯೆಟ್ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳನ್ನು ತಮಾಷೆಯಾಗಿ ವಿವರಿಸಿ, ಸಮತೋಲಿತ ಜೀವನಶೈಲಿಯ ಮಹತ್ವವನ್ನು ಸಾರಿದರು.
ಒಟ್ಟಿನಲ್ಲಿ ‘ಹ್ಯಾಪಿಯೆಸ್ಟ್ ಹೆಲ್ತ್’ನ ಈ ಶೃಂಗಸಭೆಯು ಕೇವಲ ಪರೀಕ್ಷೆಗಳು ಮತ್ತು ದತ್ತಾಂಶಗಳಿಗಿಂತ, ಸರಿಯಾದ ತಿಳುವಳಿಕೆ ಮತ್ತು ಜೀವನಶೈಲಿಯ ಬದಲಾವಣೆಯೇ ಉತ್ತಮ ಆರೋಗ್ಯದ ಮೂಲ ಎಂಬುದನ್ನು ಸಾಬೀತುಪಡಿಸಿತು.
