ಬೆಂಗಳೂರು,ಏ.6- ಬಾರ್ವೊಂದರಲ್ಲಿ ಸಣ್ಣ ವಿಚಾರಕ್ಕೆ ನಡೆದ ಗಲಾಟೆ ಮಿತಿ ಮೀರಿ ನಟ ನಿರಂಜನ್ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆಲಸದ ನಿಮಿತ್ತ ನಟ ಯಶಸ್ಸೂರ್ಯ ಅವರನ್ನು ಭೇಟಿ ಮಾಡಲು ನಿರಂಜನ್ ಮಾ.28 ರಂದು ಅವರ ನಿವಾಸಕ್ಕೆ ಹೋಗಿದ್ದರು. ಭೇಟಿ ಮಾಡಿದ ಬಳಿಕ ಸಮೀಪದ ಮಂತ್ರಿ ಅಲೈಯನ್್ಸ ಬಳಿಯ ಬಾರ್ಗೆ ಹೋಗಿದ್ದಾರೆ.
ಆ ವೇಳೆ ಬಾರ್ನಲ್ಲಿದ್ದ ಅಪರಿಚಿತ ವ್ಯಕ್ತಿಗೆ ನಟ ನಿರಂಜನ್ ತಾಗಿಸಿದ್ದಾರೆ. ಅಷ್ಟಕ್ಕೆ ನೀನು ನನ್ನನ್ನು ತಳ್ಳುತ್ತೀಯ ಎಂದು ಆ ವ್ಯಕ್ತಿ ಗಲಾಟೆ ಮಾಡಿದ್ದಾನೆ.ನಿರಂಜನ್ ನಟ ಎಂಬ ವಿಷಯ ಆ ವ್ಯಕ್ತಿಗೆ ಗೊತ್ತಾಗಿ, ನೀನು ನಟನಾದರೆ ನನಗೇನು ಎಂದು ಬೈದಿದ್ದಾನೆ.ಇದರಿಂದ ಬೇಸರಗೊಂಡ ನಟ ಬಾರ್ ಮಾಲೀಕರ ಬಳಿ ಹೋಗಿ ಮಾತನಾಡುತ್ತಿದ್ದರು.
ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಸೇರಿದಂತೆ ನಾಲ್ವರು ಮತ್ತೆ ಗಲಾಟೆ ಮಾಡಿದಾಗ ಅವರುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ನಿರಂಜನ್ ತಲೆಗೆ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ನಿರಂಜನ್ ಅವರು ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಟ ನಿರಂಜನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ದರ್ಶನ್ ಸಹೋದರನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಆ ಪಾತ್ರ ಅವರ ವ್ಯಕ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತ್ತು. ಕನ್ನಡ ಚಿತ್ರರಂಗದಲ್ಲಿ ಈಗ ತಾನೆ ಗುರುತಿಸಿಕೊಳ್ಳುತ್ತಿರುವ ನಟ ನಿರಂಜನ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ಈ ವಿವಾದದ ಮೂಲಕ ಸುದ್ದಿಯಾಗಿದ್ದಾರೆ.
