ಬೆಂಗಳೂರು, ಜೂ.10- ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ಇಂದು ನಸುಕಿನ ಜಾವ ಎಸ್ಬಿಐ ಎಟಿಎಂ ಕೇಂದ್ರದಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ದರೋಡೆಕೋರರ ತಂಡವೊಂದು ಇಂದು ಬೆಳಗಿನ ಜಾವ 3 ರಿಂದ 3.30ರ ಸುಮಾರಿನ ಮಧ್ಯೆ ದರೋಡೆಗೆ ಸಂಚು ರೂಪಿಸಿಕೊಂಡು ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕೇಂದ್ರದ ಬಳಿ
ಬಂದು ಮೊದಲಿಗೆ ಎಟಿಎಂ ಕೇಂದ್ರದ ಒಳಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಯಾವುದೇ ದೃಶ್ಯಗಳು ಸೆರೆಯಾಗದಂತೆ ಕಪ್ಪು ಬಣ್ಣದ ಸೆ್ಪ್ರೕ ಹೊಡೆದಿದ್ದಾರೆ.
ನಂತರ ಗ್ಯಾಸ್ಕಟರ್ ಸಹಾಯದಿಂದ ಎಟಿಎಂ ಯಂತ್ರದ ಕಬ್ಬಿಣದ ಬಾಗಿಲನ್ನು ಕತ್ತರಿಸಲು ಮುಂದಾಗುತ್ತಿದ್ದಂತೆ ಗ್ಯಾಸ್ ಕಟರ್ನ ಕಿಡಿ ಎಟಿಎಂ ಯಂತ್ರಕ್ಕೆ ತಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.ಇದರಿಂದ ಗಾಬರಿಗೊಂಡ ದರೋಡೆಕೋರರು ದರೋಡೆಗೆ ವಿಫಲ ಯತ್ನ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಎಟಿಎಂ ಕೇಂದ್ರದಿಂದ ದಟ್ಟವಾದ ಹೊಗೆ ಹಾಗೂ ಬೆಂಕಿ ಬರುತ್ತಿರುವುದನ್ನು ಗಮನಿಸಿದ ಎಟಿಎಂ ಕೇಂದ್ರದ ಕಟ್ಟಡ ಮಾಲೀಕರು ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಕೆಲವೇ ನಿಮಿಷಗಳಲ್ಲಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
