ಬೆಂಗಳೂರು,ಜೂ.17- ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಶಾಸಕರೊಬ್ಬರು ಅಡ್ಡಮತದಾನ ಮಾಡಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳಿಗೆ 30 ಮತಗಳನ್ನು ನಿಗದಿಪಡಿಸಿತು. ಮೊದಲು ನಿಗದಿಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ಗೆ ತಲಾ 29 ಮತಗಳನ್ನು ನಿಗದಿಪಡಿಸಿ ಉಳಿದಿರುವ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್ಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು.
ಆದರೆ, ಮತದಾನ ಆರಂಭವಾಗುತ್ತಿದ್ದಂತೆ ಜೆಡಿಎಸ್ನ ಪ್ರಭಾವಿ ಶಾಸಕರೊಬ್ಬರು ಏಕಾಂಗಿಯಾಗಿ ಬಂದು ಯಾರಿಗೂ ಹೇಳದಂತೆ ಮತ ಚಲಾವಣೆ ಮಾಡಿ ಹೋಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ವಿಧಾನಸೌಧದ ಪಡಸಾಲೆಯಲ್ಲಿ ಈ ಸುದ್ದಿ ಒಂದು ಕ್ಷಣ ಮಿಂಚಿನ ಸಂಚಾರ ಉಂಟುಮಾಡಿ ಜೆಡಿಎಸ್ನ ಮೈಸೂರು ಭಾಗದ ಈ ಪ್ರಭಾವಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆಂಬ ಗುಸುಗುಸು ಹಬ್ಬಿತು.
ನಿಯಮಗಳ ಪ್ರಕಾರ, ವಿಧಾನ ಪರಿಷತ್ ಚುನಾವಣೆಯು ಗುಪ್ತ ಮತದಾನವಾಗಿರುವುದರಿಂದ ಯಾವ ಶಾಸಕ ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಶಾಸಕರ ನಡವಳಿಕೆ ಮೇಲೆ ಇಂಥವರು ಇಂತಹ ಅಭ್ಯರ್ಥಿಗೆ ಮತ ಚಲಾಯಿಸಿರಬಹುದೆಂಬ ಶಂಕೆ ವ್ಯಕ್ತವಾಗುತ್ತದೆ. ಯಾವಾಗ ಈ ಶಾಸಕರು ಕಾಂಗ್ರೆಸ್ಗೆ ಮತ ಹಾಕಿದ್ದಾರೆಂಬ ವದಂತಿ ಹಬ್ಬಿತೋ ಬಿಜೆಪಿ ತನ್ನ ರಣತಂತ್ರ ಬದಲಾಯಿಸಿ ತನ್ನ ಅಭ್ಯರ್ಥಿಗಳಿಗೆ ನಿಗದಿಪಡಿಸಿದ 29 ಮತಗಳಿಗಿಂತ 30 ಮತಗಳನ್ನು ಚಲಾಯಿಸುವಂತೆ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಸೂಚನೆ ಕೊಟ್ಟರು.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ತಮೆಲ್ಲ ಶಾಸಕರನ್ನು ಕೊಠಡಿಗೆ ಕರೆಸಿ ತಮ ಪಕ್ಷದ ಅಭ್ಯರ್ಥಿಗಳಿಗೆ 30 ಮತಗಳನ್ನು ಚಲಾವಣೆ ಮಾಡಬೇಕೆಂದು ಸೂಚಿಸಿದರು. ಅಲ್ಲಿಗೆ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿಯಿಂದ ಹೆಚ್ಚುವರಿಯಾಗಿ ಕೇವಲ ಮೂರು ಮತಗಳು ಮಾತ್ರ ಚಲಾವಣೆ ಆದಂತಾಗಿದೆ.
