ಢಾಕಾ, ಜ.18- ಬಾಂಗ್ಲಾದೇಶದ ಗಾಜಿಪುರದಲ್ಲಿ ಬಾಳೆಹಣ್ಣಿನ ವಿಚಾರವಾಗಿ ನಡೆದ ಜಗಳದಲ್ಲಿ ಉದ್ಯಮಿಯನ್ನು ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಕಳೆದ ರಾತ್ರಿ ನಡೆದಿದೆ. ಗಾಜಿಪುರ ಜಿಲ್ಲೆಯ ಕಾಳಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರೆದಿದೆ.
ಬೈಶಾಖಿ ಸ್ವಿಂಟ್ಮೀಟ್ ಮತ್ತು ಹೊಟೇಲ್ ಮಾಲೀಕ ಲಿಟಿನ್ ಚಂದ್ರಘೋಷ್ (55) ಹತ್ಯೆಯಾದವರು.ಸೆಮಿಸ್ ಮಿಯಾ, ಪತ್ನಿ ಮಜೀದಾ ಖಾತುನ್ (45) ಮತ್ತು ಮಗ ಮಾಸುಮ್ ಮಿಯಾ (28) ಕೊಲೆ ಮಾಡಿದ ಆರೋಪಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಕಾಳಿಗಂಜ್ ಪೊಲೀಸ್ ಠಾಣೆ ಅಧಿಕಾರಿ ಜಾಕೀರ್ ಹುಸೇನ್ ತಿಳಿಸಿದ್ದಾರೆ.
ಸೆಮಿಸ್ ಮಿಯಾ ಬಾಳೆತೋಟವನ್ನು ಹೊಂದಿದ್ದು, ಅದರಲ್ಲಿ ಕೆಲವು ಗೊನೆಗಳು ಇರಲಿಲ್ಲ. ಹೀಗಾಗಿ ಅವರು ಹೊಟೇಲ್ಗೆ ಬಂದು ಜಗಳವಾಡಿದ್ದರು. ಈ ವೇಳೆ ಅವರ ಪತ್ನಿ ಮತ್ತು ಮಗ ಅಲ್ಲಿಗೆ ಬಂದು ಲಿಟಿನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
