ಅಬುಜಾ,ಜೂ.28 – ವಾಯವ್ಯ ನೈಜೀರಿಯಾದ ಜಂಫಾರಾ ರಾಜ್ಯದ ರೈತರ ಸಮುದಾಯದ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲಾತಾ ಮಾಫಾರಾಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಇದರ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹಿಂಸಾಚಾರ ಮರುಕಳಿಸುತ್ತಲೇ ಇದೆ.
ರಾಷ್ಟ್ರೀಯ ಸಂಸತ್ತಿನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾದ ಅಬ್ದುಲ ಅಜೀಜ್ ಯಾರಿ , ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತದ ಮುಖ್ಯಸ್ಥ ಯಹಯಾ ಯಾರಿ ಮೃತರ ಅಂತ್ಯಕ್ರಿಯೆಯ ವೇಳೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಭಾವನಾತಕವಾಗಿ ಮಾತನಾಡಿ, ಅಧ್ಯಕ್ಷ ಬೋಲಾ ಟಿನುಬು ಹಾಗೂ ಈ ಪ್ರದೇಶದವರೇ ಆಗಿರುವ ಕಿರಿಯ ರಕ್ಷಣಾ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ಹತ್ಯಾಕಾಂಡಗಳನ್ನು ತಡೆಯುವಂತೆ ಮನವಿ ಮಾಡಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಜಂಫಾರಾ ರಾಜ್ಯದ ಗೊರೋನ್ ನಾಮಯೆ ಪ್ರದೇಶದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ 17 ರೈತರನ್ನು ಹತ್ಯೆಗೈದು ಕನಿಷ್ಠ 13 ಮಂದಿಯನ್ನು ಗಾಯಗೊಳಿಸಿದ್ದರು.
ವಿಶ್ವಸಂಸ್ಥೆ ಪ್ರಕಾರ, ಉತ್ತರ ನೈಜೀರಿಯಾದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಬಂಡಾಯ ಮತ್ತು ಶಸ್ತ್ರಸಜ್ಜಿತ ಹಿಂಸಾಚಾರದಿಂದ ಸಾವಿರಾರು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಉತ್ತರ-ಮಧ್ಯ ಮತ್ತು ವಾಯವ್ಯ ನೈಜೀರಿಯಾದಲ್ಲಿ ಸಕ್ರಿಯವಾಗಿರುವ ಶಸ್ತ್ರಸಜ್ಜಿತ ಗುಂಪುಗಳು ಜನರನ್ನು ಅಪಹರಿಸಿ ಹಣ ವಸೂಲಿ ಮಾಡುವುದು, ರೈತರಿಂದ ಬಲವಂತವಾಗಿ ತೆರಿಗೆ ಸಂಗ್ರಹಿಸುವುದು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ.
ಅಧ್ಯಕ್ಷ ಬೋಲಾ ಟಿನುಬು ಸರ್ಕಾರ ಈ ಹಿಂಸಾಚಾರವನ್ನು ನಿಯಂತ್ರಿಸುವುದಾಗಿ ಹಲವು ಬಾರಿ ಭರವಸೆ ನೀಡಿದ್ದರೂ, ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.
