ನವದೆಹಲಿ,ಏ.8- ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿರುವ ಅಸ್ಸಾಂ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.
ದಕ್ಷಿಣ ಭಾರತದ ದೇವರ ನಾಡು ಎಂದೇ ಹೆಸರಾಗಿರುವ ಕೇರಳದಲ್ಲಿ (200), ಅಸ್ಸಾಂ (126) ಮತ್ತು ಪುದುಚೇರಿ(30) ಕ್ಷೇತ್ರಗಳಿಗೆ ನಾಳೆ ಭಾರೀ ಬಿಗಿ ಭದ್ರತೆ ನಡುವೆ ಮತದಾನ ಜರುಗಲಿದೆ.
ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಅನೇಕರ ರಾಜಕೀಯ ಭವಿಷ್ಯವನ್ನು ಮತದಾರ ಇವಿಎಂನಲ್ಲಿ ಬರೆಯಲಿದ್ದಾನೆ.
ಕೇರಳದಲ್ಲಿ ಸತತ ಎರಡು ಬಾರಿ ಅಧಿಕಾರ ಗದ್ದುಗೆ ಹಿಡಿದಿರುವ ಮುಖ್ಯಮಂತ್ರಿ ವಿಜಯನ್ ಪಿಣರಾಯಿ ಅವರ ಎಲ್ಡಿಎಫ್ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಅಧಿಕಾರಕ್ಕೆ ಬರಲಿದೆಯೇ ಎಂಬುದು ತೀರ್ಮಾನವಾಗಲಿದೆ.
ಎಲ್ಡಿಎಫ್ಗೆ ಎಲ್ಲಾ ಹಂತದಲ್ಲೂ ಠಕ್ಕರ್ ಕೊಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದಲ್ಲಿ ಈ ಬಾರಿ ಅಧಿಕಾರ ಹಿಡಿಯಲು ತುದಿಗಾಲಲ್ಲಿ ನಿಂತಿದೆ. ಹೀಗಾಗಿ ದೇವರ ನಾಡಿನಲ್ಲಿ ಯುಡಿಎಫ್-ಎಲ್ಡಿಎಫ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇದರ ನಡುವೆ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಪುಟಿದೆದ್ದಿದ್ದು ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.
ಬಹುತೇಕ ವಲಸಿಗರು ಮತ್ತು ಕಾಫಿತೋಟದ ಮಾಲೀಕರಿಂದಲೇ ತುಂಬಿ ತುಳುಕುತ್ತಿರುವ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 126 ವಿಧಾನ ಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಾಳೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಹಿಮಂತ್ ಬಿಶ್ವಾಸ್ ಶರ್ಮ ಹಾಗೂ ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೋಗಯ್ ನಡುವಿನ ಕುರುಕ್ಷೇತ್ರವೆಂದೇ ಬಿಂಬಿತವಾಗಿರುವ ಅಸ್ಸಾಂನಲ್ಲಿ ಅಧಿಕಾರ ಯಾರಿಗೆ ಎಂಬುದು ನಾಳೆ ನಿರ್ಧಾರವಾಗಲಿದೆ.
ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಒಂದೇ ಹಂತದ ಮತದಾನವನ್ನು ನಡೆಸಲಿದೆ. ರಾಜ್ಯದಲ್ಲಿ ಸತತ ಎರಡು ಬಾರಿ ಅಧಿಕಾರ ನಡೆಸಿರುವ ಬಿಜೆಪಿ ನೇತೃತ್ವದ ಎನ್ಡಿಎ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ. ಸತತ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಇಲ್ಲಿಯೂ ಜಾದೂ ನಡೆಸುವ ನಿರೀಕ್ಷೆಯಲ್ಲಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಒಂದೇ ಹಂತದ ಮತದಾನ ಜರುಗಲಿದೆ. ಇಲ್ಲಿ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
