ಕಾರವಾರ,ಮೇ.16-ಇಲ್ಲಿನ ಅನಮೋಡ್ ಘಟ್ಟ ಭಾಗದ ಕಾಡಿನ ಹಾದಿಯಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ತೆರಳಿದಾಗ ನಾಗರಹಾವು ಕಡಿದು ಗೋವಾ ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೇತನ್ ಭಾಟಿಕರ್ ಮೃತಪಟ್ಟ ವ್ಯಕ್ತಿ ಎಂದು ಗುರುತ್ತಿಸಲಾಗಿದೆ.
ಇವರು ಗೋವಾದ ಪೊಂಡಾದಿಂದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಬಳಿಯ ಅನಮೋಡ್ ಬಳಿ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಬಂದಿದ್ದರು. ಮೂತ್ರ ವಿಸರ್ಜನೆಗಾಗಿ ಅನಮೋಡ್ ಘಟ್ಟ ಭಾಗದ ಕಾಡಿನಲ್ಲಿ ಕಾರು ನಿಲ್ಲಿಸಿ ತೆರಳಿದ್ದರು. ಮೂತ್ರ ವಿಸರ್ಜಿಸುವ ವೇಳೆ ನಾಗರಹಾವು ಕಡಿದಿದೆ ಎಂದು ತಿಳಿದುಬಂದಿದೆ.
ತಕ್ಷಣ ಗೋವಾದ ಜಿಎಮ್ಸಿ ಮೆಡಿಕಲ್ ಕಾಲೇಜಿನ (ಬಾಂಬೋಲಿನ್) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾ ರಾಜ್ಯದ ಪೊಂಡಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಗೋವಾದ ಕೃಷಿ ಸಚಿವ ರವಿ ನಾಯ್ಕ ಅಕಾಲಿಕ ನಿಧನದಿಂದ ತೆರವಾಗಿದ್ದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು ಎಂದು ಗೊತ್ತಾಗಿದೆ.
