Sunday, April 28, 2024
Homeಬೆಂಗಳೂರುಬೆಂಗಳೂರಲ್ಲಿ ಸ್ನೇಹಿತರಿಂದಲೇ ಉತ್ತರ ಪ್ರದೇಶ ಮೂಲದ ಪೇಂಟರ್ ಕೊಲೆ

ಬೆಂಗಳೂರಲ್ಲಿ ಸ್ನೇಹಿತರಿಂದಲೇ ಉತ್ತರ ಪ್ರದೇಶ ಮೂಲದ ಪೇಂಟರ್ ಕೊಲೆ

ಬೆಂಗಳೂರು, ಮಾ.27- ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರೇ ರಾಡಿನಿಂದ ಹೊಡೆದು, ಚಾಕುವಿನಿಂದ ಕುತ್ತಿಗೆಗೆ ಇರಿದು ಉತ್ತರ ಪ್ರದೇಶ ಮೂಲದ ಪೇಂಟರ್ನನ್ನು ಕೊಲೆ ಮಾಡಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಜಕುಮಾರ್ (36) ಕೊಲೆಯಾದ ಪೇಂಟರ್. ಈತ ಒಂದು ವರ್ಷದ ಹಿಂದೆ ಕೆಲಸದ ನಿಮಿತ್ತ ಇಬ್ಬರು ಸ್ನೇಹಿತರೊಂದಿಗೆ ನಗರಕ್ಕೆ ಬಂದಿದ್ದನು.

ಮಹದೇವಗುಪ್ತ ಎಂಬುವವರು ಪೇಂಟರ್ ಕೆಲಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಗೋಕಾಕ್ಪುರ ಮೂಲದ ರಾಜ್ಕುಮಾರ್, ಸೂರಜ್ಕುಮಾರ್ ಮತ್ತು ಜೈಸಿಂಗ್ ಅವರಿಗೆ ನಾಗವಾರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದು, ಈ ಮೂವರು ಒಟ್ಟಿಗೆ ನೆಲೆಸಿದ್ದರು. ಕೆಲಸ ಹಾಗೂ ಪೇಮೆಂಟ್ ವಿಚಾರವಾಗಿ ಆಗಾಗ್ಗೆ ಈ ಮೂವರ ನಡುವೆ ಜಗಳವಾಗುತ್ತಿತ್ತು.

ಹೋಳಿ ಹಬ್ಬದ ನಿಮಿತ್ತ ನಿನ್ನೆ ಕೆಲಸಕ್ಕೆ ರಜೆ ಇತ್ತು. ಹಾಗಾಗಿ ಈ ಮೂವರು ಸೇರಿಕೊಂಡು ಹೋಳಿ ಆಚರಿಸಿ ಮದ್ಯಪಾನ ಪಾರ್ಟಿ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮೂವರ ನಡುವೆ ಜಗಳ ನಡೆದಿದೆ. ತಾಳ್ಮೆ ಕಳೆದುಕೊಂಡ ಸೂರಜ್ಕುಮಾರ್ ಹಾಗೂ ಜೈಸಿಂಗ್ ಸೇರಿಕೊಂಡು ರಾಡಿನಿಂದ ರಾಜ್ಕುಮಾರ್ ತಲೆಗೆ ಹೊಡೆದು ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾರೆ.

ನಂತರ ಅವರಿಬ್ಬರು ಹೊರಗೆ ಹೋಗಿ ಸುತ್ತಾಡಿಕೊಂಡು ಸಂಜೆ ಮನೆಗೆ ಬಂದಿದ್ದು, ಮುಂದೇನು ಮಾಡುವುದೆಂದು ಗೊತ್ತಾಗದೇ ಮೃತದೇಹವನ್ನು ಹೊರಗೆ ಸಾಗಿಸಲು ಯೋಚಿಸಿದ್ದಾರೆ.ಆ ವೇಳೆ ರಸ್ತೆಯಲ್ಲಿ ಜನರು ತಿರಗಾಡುತ್ತಿರುವುದನ್ನು ಕಂಡು ಶವ ಸಾಗಿಸಲು ಸಾಧ್ಯವಾಗದೇ ಸುಮ್ಮನಾಗಿದ್ದಾರೆ.

ತಾವು ಸಿಕ್ಕಿಹಾಕಿಕೊಳ್ಳುವ ಭಯದಿಂದ ರಾತ್ರಿ 11 ಗಂಟೆ ಸುಮಾರಿನಲ್ಲಿ ಸೂರಜ್ ಕುಮಾರ್ ಗೋವಿಂದಪುರ ಪೊಲೀಸ್ಠಾಣೆಗೆ ಹೋಗಿ ಕತೆ ಕಟ್ಟಿ ದೂರು ನೀಡಲು ಮುಂದಾದಾಗ ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸೂರಜ್ಕುಮಾರ್ ಹಾಗೂ ಜೈಸಿಂಗ್ನನ್ನು ವಶಕ್ಕೆ ಪಡೆದು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮನೆ ಮಾಲೀಕ ವೆಂಕಟರಮಣಪ್ಪ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News