ಬೆಂಗಳೂರು,ಮೇ 19-ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಠಾಣಾಧಿಕಾರಿಗಳು ನಿಯಮಿತ ಸಂಪರ್ಕ ಇಟ್ಟುಕೊಂಡರೆ ಅಪರಾಧಿಗಳು, ಮಾದಕ ವಸ್ತು ಮಾರಾಟ, ಕಳ್ಳ ಸಾಗಾಣಿಕೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ ಸಲೀಂ ಅವರು ತಿಳಿಸಿದ್ದಾರೆ.
ಎಲ್ಲಾ ಠಾಣಾಧಿಕಾರಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಅವರು ವಾಸಿಸುವ ವಸತಿ ಸಮುದಾಯಗಳಲ್ಲಿನ ಸಮಾಜವಿರೋಧಿ ಚಟುವಟಿಕೆಗಳ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಅವರ ಸಹಕಾರದಿಂದ ಸಮುದಾಯದ ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸಬಹುದಾಗಿದೆ ಎಂದು ಅವರು ಜ್ಞಾಪನ ಪತ್ರದಲ್ಲಿ ಹೇಳಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಅನುಭವ, ಕೌಶಲ್ಯ ಹಾಗೂ ಸೇವೆಯಲ್ಲಿ ಪಡೆದ ಜ್ಞಾನದಿಂದಾಗಿ ಪೊಲೀಸ್ ಇಲಾಖೆಯ ಅಮೂಲ್ಯ ಆಸ್ತಿಯ ಪ್ರತಿನಿಧಿಗಳಾಗಿದ್ದಾರೆ.ಪೊಲೀಸ್ ವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು, ಅವರು ನಿವೃತ್ತಿ ನಂತರವೂ ಅರ್ಥಪೂರ್ಣವಾಗಿ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೊಡಗಿಸಿ ಕೊಳ್ಳುವುದು ಕೇವಲ ಕಾರ್ಯಾಚರಣೆಯ ಅನುಕೂಲ ವಲ್ಲ ,ಬದಲಾಗಿ ಕಾರ್ಯತಂತ್ರದ ಅಗತ್ಯವಾಗಿದೆ. ಅವರ ವಿಶ್ವಾಸವನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮ ವ್ಯಾಪ್ತಿಯಲ್ಲಿ ನೆಲೆಸಿರುವ ಎಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ಹೆಸರನ್ನು ನಿಗಧಿತ ನಮೂನೆಯಲ್ಲಿ ಸೇರಿಸಬೇಕು.ಅವರ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಹಾಯ ಕೋರಿದಾಗ ಸಾಧ್ಯವಾದಷ್ಟು ಸ್ಪಂದಿಸಿ ಎಂದು ಇದೇ ವೇಳೆ ಅವರು ಸಲಹೆ ನೀಡಿದ್ದಾರೆ.
