Homeರಾಜ್ಯಎಸ್‌ಐಆರ್‌: ಶೇ.83ರಷ್ಟು ಮತದಾರರಿಗೆ ನೋಟಿಸ್‌ ತಲುಪಿಲ್ಲ

ಎಸ್‌ಐಆರ್‌: ಶೇ.83ರಷ್ಟು ಮತದಾರರಿಗೆ ನೋಟಿಸ್‌ ತಲುಪಿಲ್ಲ

ಬೆಂಗಳೂರು, ಸೆ.8- ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮತದಾರರಲ್ಲಿ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದ್ದು, ನೋಟಿಸ್‌ ವಿತರಣೆ ಪ್ರಕ್ರಿಯೆಯೇ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ನಿಗದಿತ ವೇಳಾಪಟ್ಟಿಯಂತೆ ನೋಟಿಸ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದ್ದರೂ, ಸಿದ್ಧಪಡಿಸಿರುವ ನೋಟಿಸ್‌ಗಳ ಪೈಕಿ ಶೇ.83ರಷ್ಟು ಇನ್ನೂ ಮತದಾರರನ್ನು ತಲುಪಿಲ್ಲ.

ರಾಜ್ಯದಲ್ಲಿ ಇದುವರೆಗೆ 43.8 ಲಕ್ಷ ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಕೇವಲ 7.3 ಲಕ್ಷ ನೋಟಿಸ್‌ಗಳು ಮಾತ್ರ ಸಂಬಂಧಪಟ್ಟ ಮತದಾರರಿಗೆ ತಲುಪಿವೆ. ಸುಮಾರು 36.4 ಲಕ್ಷ ನೋಟಿಸ್‌ಗಳು ಇನ್ನೂ ವಿತರಣೆ ಬಾಕಿಯಿದ್ದು, ಇದು ಒಟ್ಟು ನೋಟಿಸ್‌ಗಳ ಶೇ.83ರಷ್ಟಾಗಿದೆ.

ಚುನಾವಣಾ ಕಚೇರಿ ಪ್ರಕಟಿಸಿರುವ ಪಟ್ಟಿಗಳಲ್ಲೂ ಕೆಲವೆಡೆ ನಿಖರವಾದ ವಿಚಾರಣೆಯ ದಿನಾಂಕವನ್ನು ನಮೂದಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಬಿಎಲ್‌ಒ ಭೇಟಿ ಯಾವಾಗ ನಡೆಯಲಿದೆ ಹಾಗೂ ವಿಚಾರಣೆಗೆ ಯಾವ ದಿನ ಹಾಜರಾಗಬೇಕು ಎಂಬ ಬಗ್ಗೆ ಮತದಾರರಲ್ಲಿ ಅನಿಶ್ಚಿತತೆ ಮುಂದುವರಿದಿದೆ.

ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ ಸೇರಿದಂತೆ ವಿವಿಧ ನಾಗರಿಕ ವೇದಿಕೆಗಳು ಕೂಡ ನೋಟಿಸ್‌ಗಳು ವಿಚಾರಣೆಗೆ ಕೇವಲ ಒಂದು ದಿನ ಮುನ್ನ ತಲುಪುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆಗೆ ಸಿದ್ಧರಾಗಲು ಇದರಿಂದ ಸಾಕಷ್ಟು ಸಮಯ ಸಿಗುತ್ತಿಲ್ಲ ಎಂಬುದು ಅವರ ಅಳಲು.

ದಾಖಲೆಗಳ ಪರಿಶೀಲನೆಯಲ್ಲಿ ಗೊಂದಲ

ಮತದಾರರ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಬೂತ್‌ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ನಡುವೆ ಏಕರೂಪತೆಯಿಲ್ಲದಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಆಧಾರ್‌ ಕಾರ್ಡ್‌ ಸೇರಿದಂತೆ ದಾಖಲೆಗಳ ಸ್ವೀಕಾರದ ವಿಚಾರದಲ್ಲಿ ಕೆಲವೆಡೆ ವಿಭಿನ್ನ ರೀತಿಯಲ್ಲಿ ಸೂಚನೆ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಕೆಲವು ಕಡೆ ಆಧಾರ್‌ ಕಾರ್ಡ್‌ ಅನ್ನು ಸ್ವೀಕರಿಸದೆ, ಎಲ್‌ಐಸಿ ಬಾಂಡ್‌, ಬ್ಯಾಂಕ್‌ ಪಾಸ್‌ಬುಕ್‌ ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಸುವಂತೆ ಒತ್ತಾಯಿಸಲಾಗುತ್ತಿದೆ ಎನ್ನಲಾಗಿದೆ.

ಇದರ ಜತೆಗೆ ವಾರದ ಕೆಲಸದ ದಿನಗಳಲ್ಲೇ ವಿಚಾರಣೆಗಳನ್ನು ನಿಗದಿಪಡಿಸಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ವಲಯದ ನೌಕರರು, ಸಾಫ್ಟ್‌ವೇರ್‌ ವೃತ್ತಿಪರರು ತೊಂದರೆ ಅನುಭವಿಸುವಂತಾಗಿದೆ. ವಿಚಾರಣೆಗೆ ಹಾಜರಾಗಲು ರಜೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಶೇಷವಾಗಿ ಬೆಂಗಳೂರು ನಗರದಲ್ಲಿ ಸಮಸ್ಯೆ ಹೆಚ್ಚು ಗೋಚರಿಸುತ್ತಿದೆ. ನೋಟಿಸ್‌ ನೀಡಬೇಕಾದ ಮತದಾರರ ಪಟ್ಟಿಯನ್ನು ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದರೂ, ಹಲವೆಡೆ ವಿಚಾರಣೆಯ ನಿಖರ ದಿನಾಂಕವನ್ನು ನಮೂದಿಸದಿರುವುದು ಮುಂದಿನ ಕ್ರಮವೇನು ಎಂಬ ಗೊಂದಲಕ್ಕೆ ಕಾರಣವಾಗಿದೆ.

ಯಾರಿಗೆ ನೋಟಿಸ್‌?

ಎಸ್‌ಐಆರ್‌ನ ಈ ಹಂತದಲ್ಲಿ ಮುಖ್ಯವಾಗಿ 2002ರ ಹಿಂದಿನ ಮತದಾರರ ಪಟ್ಟಿಯೊಂದಿಗೆ ತಮ್ಮ ವಿವರಗಳನ್ನು ಮ್ಯಾಪ್‌ ಮಾಡಲು ಸಾಧ್ಯವಾಗದವರು ಹಾಗೂ ದಾಖಲೆಗಳಲ್ಲಿ ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ ಮತದಾರರಿಗೆ ವಿಚಾರಣೆಯ ನೋಟಿಸ್‌ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಸುಮಾರು 4.47 ಕೋಟಿ ಮತದಾರರು ಕರಡು ಪಟ್ಟಿಯಲ್ಲಿದ್ದು, ಹಿಂದಿನ ಹಂತದಲ್ಲಿ 5.54 ಕೋಟಿಗೂ ಅಧಿಕ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಈ ಪರಿಶೀಲನೆ ವೇಳೆ ಹೆಚ್ಚಿನ ಸಂಖ್ಯೆಯ ಹೆಸರುಗಳು ಗೈರು (ಅಬ್ಸೆಂಟ್‌), ಸ್ಥಳಾಂತರಗೊಂಡ (ಶಿಫ್ಟೆಡ್‌), ಮೃತಪಟ್ಟ (ಡೆಡ್‌), ದ್ವಿಪ್ರತಿಗಳು (ಡ್ಯೂಪ್ಲಿಕೇಟ್‌) ಹಾಗೂ ಇತರೆ ವರ್ಗಗಳಿಗೆ ಸೇರಿರುವುದು ಪತ್ತೆಯಾಗಿತ್ತು.

ಹಂತ ಹಂತವಾಗಿ ನೋಟಿಸ್‌ ವಿತರಣೆ

ನೋಟಿಸ್‌ಗಳನ್ನು ಎಲ್ಲ ಮತದಾರರಿಗೂ ಒಂದೇ ಬಾರಿಗೆ ನೀಡದೆ, ವಿಚಾರಣೆಯ ದಿನಾಂಕದ ಆಧಾರದ ಮೇಲೆ ಹಂತ ಹಂತವಾಗಿ ವಿತರಿಸಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲು ವಿಚಾರಣೆ ನಿಗದಿಯಾಗಿರುವ ಮತದಾರರಿಗೆ ನೋಟಿಸ್‌ ನೀಡಲಾಗುತ್ತಿದೆ. ಹೀಗಾಗಿ ನೋಟಿಸ್‌ ಇನ್ನೂ ತಲುಪಿಲ್ಲವೆಂದು ಮತದಾರರು ಆತಂಕಪಡಬೇಕಾಗಿಲ್ಲ ಎಂದು ಸಿಇಒ ಕಚೇರಿ ಮನವಿ ಮಾಡಿದೆ. ಆದರೆ ವಿಚಾರಣೆಗೆ ಕೆಲವೇ ದಿನಗಳು ಅಥವಾ ಒಂದು ದಿನ ಮುನ್ನ ನೋಟಿಸ್‌ ತಲುಪುತ್ತಿರುವುದರಿಂದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲು ಸಮಯದ ಕೊರತೆ ಎದುರಾಗುತ್ತಿದೆ ಎಂಬುದು ಮತದಾರರ ಅಸಮಾಧಾನವಾಗಿದೆ.

ಮ್ಯಾಪಿಂಗ್‌ ದೋಷದ ಪ್ರಶ್ನೆ

ಬೆಂಗಳೂರಿನಲ್ಲಿ ಮೊದಲ ಹಂತದ ವಿಚಾರಣೆಗಳು ಸೆಪ್ಟೆಂಬರ್‌ ಮೊದಲ ವಾರದಲ್ಲೇ ಆರಂಭವಾಗಿವೆ. ಸೆಪ್ಟೆಂಬರ್‌ 4ರ ಮಧ್ಯಾಹ್ನದವರೆಗೆ 206 ವಿಚಾರಣೆಗಳು ಪೂರ್ಣಗೊಂಡಿದ್ದು, ಈ ಪ್ರಕರಣಗಳಲ್ಲಿ ಯಾವುದನ್ನೂ ತಿರಸ್ಕರಿಸಲಾಗಿಲ್ಲ ಎಂದು ಸಿಇಒ ಕಚೇರಿ ತಿಳಿಸಿತ್ತು.

ಆದರೆ ಸರಿಯಾದ ಮಾಹಿತಿ ನೀಡಿದ್ದ ಕೆಲ ಮತದಾರರನ್ನೂ ‘ನಾಟ್‌ ಮ್ಯಾಪ್ಡ್‌’ ಎಂದು ಗುರುತಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದು ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಾಹಿತಿ ನೀಡುವಲ್ಲಿ ಮತದಾರರಿಂದ ತಪ್ಪಾಗಿದೆಯೇ ಅಥವಾ ಹಿಂದಿನ ದಾಖಲೆಗಳ ಡೇಟಾ ಮ್ಯಾಪಿಂಗ್‌ನಲ್ಲಿ ದೋಷವಾಗಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.

ಮತದಾರರು ತಮ್ಮ ಗುರುತು, ವಿಳಾಸ ಹಾಗೂ ಹಿಂದಿನ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸಮರ್ಥಿಸಲು ದಾಖಲೆಗಳನ್ನು ಸಲ್ಲಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಯಾವ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಸಲ್ಲಿಸಿದರೆ ಸಾಕು ಎಂಬ ಬಗ್ಗೆ ನೆಲಮಟ್ಟದಲ್ಲಿ ಏಕರೂಪದ ಮಾಹಿತಿ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಹೀಗಾಗಿ ಎಸ್‌ಐಆರ್‌ ಪ್ರಕ್ರಿಯೆಯ ಉದ್ದೇಶದ ಬಗ್ಗೆ ಯಾವುದೇ ಗೊಂದಲವಿಲ್ಲದಂತೆ, ನೋಟಿಸ್‌ ವಿತರಣೆ, ವಿಚಾರಣೆಯ ದಿನಾಂಕ ಹಾಗೂ ದಾಖಲೆಗಳ ಸ್ವೀಕಾರದ ಕುರಿತು ಮತದಾರರಿಗೆ ಸ್ಪಷ್ಟ ಮತ್ತು ಏಕರೂಪದ ಮಾರ್ಗಸೂಚಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

RELATED ARTICLES
spot_img

Latest News