ಬೆಂಗಳೂರು,ಮೇ 13-ಜಿಲೆಟಿನ್ ಕಡ್ಡಿಗಳನ್ನು ಇಟ್ಟವರ ಪತ್ತೆಗಾಗಿ ಒಂದು ತಂಡ ತಮಿಳುನಾಡಿಗೆ ತೆರಳಿ ಶೋಧ ನಡೆಸುತ್ತಿದೆ.ನಗರದ ಹೊರವಲಯದ ಕಗ್ಗಲಿಪುರದ ತಾತಗುಣಿ ಬಳಿಯ ವಡೆರಹಳ್ಳಿ ಗೇಟ್ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ತನಿಖಾ ತಂಡಗಳಿಗೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ.
ಇದು ಕಾಕತಾಳೀಯವೇ ಅಥವಾ ಉದ್ದೇಶಪೂರ್ವಕವಾಗಿದೆಯೋ, ಇದರ ಹಿಂದೆ ಯಾವುದಾದರೂ ಸಂಚು ಅಡಗಿದೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕಂಟ್ರೋಲ್ ರೂಮ್ಗೆ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸರ ವಶದಲ್ಲಿರುವ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಲೋಹಿತ್ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಒಂದು ದಿನ ತಮಿಳುನಾಡಿಗೆ ಹೋಗಿರುವುದು ಗೊತ್ತಾಗಿದೆ.
ಆತ ಯಾವ ಉದ್ದೇಶಕ್ಕಾಗಿ ತಮಿಳುನಾಡಿಗೆ ಹೋಗಿದ್ದನು. ಅಲ್ಲಿಂದ ಸ್ಫೋಟಕ ಏನಾದರೂ ತಂದಿದ್ದನೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ತಮಿಳುನಾಡಿನಲ್ಲಿ ಜಿಲೆಟಿನ್ ಕಡ್ಡಿ ತಯಾರಿಕೆಯ ಕಾರ್ಖಾನೆಗಳು ಹೆಚ್ಚು ಇವೆ. ತನಿಖಾ ತಂಡ ಅಲ್ಲಿನ ಕಾರ್ಖಾನೆಗಳಿಗೂ ಭೇಟಿ ನೀಡಿ, ಜಿಲೆಟಿನ್ ಕಡ್ಡಿ ತಯಾರಿಸುವವರು ಹಾಗೂ ಮಾರಾಟಗಾರರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.
ಹೊರವಲಯದಲ್ಲಿ ಸಿಕ್ಕಿರುವ ಜಿಲೆಟಿನ್ ಕಡ್ಡಿಗಳು ಸುಮಾರು 2 ವರ್ಷಕಿಂತಲೂ ಹಳೆಯವು. ಒಂದು ವೇಳೆ ಅದನ್ನು ಸ್ಫೋಟಿಸಿದರೂ ಹೆಚ್ಚು ಹಾನಿ ಉಂಟು ಮಾಡುವ ಸಾಮರ್ಥ್ಯ ಕಳೆದುಕೊಂಡಿರುತ್ತವೆ. ಎಂಬುವುದು ಗೊತ್ತಾಗಿದೆ.
ಒಂದು ವೇಳೆ ಕ್ವಾರಿಗಳಲ್ಲಿ ಕೆಲಸ ಮಾಡುವವರು ಏನಾದರೂ ಬಳಕೆಗೆ ಬರುವುದಿಲ್ಲವೆಂದು ಈ ಸ್ಥಳದಲ್ಲಿ ಇಟ್ಟು ಹೋಗಿರಬಹುದೆಂಬ ಬಗ್ಗೆಯೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಒಟ್ಟಾರೆ ಜಿಲೆಟಿನ್ ಕಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದ ದಿನವೇ ಪತ್ತೆಯಾಗಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ವಿವಿಧ ದೃಷ್ಠಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
