ಬೆಂಗಳೂರು,ಏ.15- ಧಾರವಾಡದಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಅವರ ಹತ್ಯೆ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ಎಲ್ಲೆಡೆ ವ್ಯಾಪಕ ಬಿಗಿಬಂದೋಬಸ್ತ್ ಆಯೋಜಿಸಲಾಗಿತ್ತು.
ಸುಮಾರು 10 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಗಜಾನನ ಭಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿದಂತೆ ವ್ಯಾಪಕ ಬಂದೋಬಸ್ತ್ ಆಯೋಜಿಸಲಾಗಿತ್ತು. ಅತ್ತ ಧಾರವಾಡದಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಿನಯ್ಕುಲಕರ್ಣಿ ತಮ ಇಬ್ಬರು ಪುತ್ರಿಯರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದರು. ಎಲ್ಲಾ 21 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿಯವರ ರಾಜಕೀಯ ಭವಿಷ್ಯ ನಿರ್ಧರಿಸುವ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ.
2016ರ ಜೂನ್ 15ರಂದು ಧಾರವಾಡದ ಜಿಮ್ನಲ್ಲಿ ಯೋಗೇಶ್ಗೌಡ ಅವರ ಹತ್ಯೆಯಾಗಿತ್ತು. ಆರಂಭದಲ್ಲಿ ಜಮೀನಿನ ಗಲಾಟೆಗೆ ಸೀಮಿತವಾಗಿ ಗಲಾಟೆಯಾಗಿದೆ ಎಂದು ಸ್ಥಳೀಯ ಪೊಲೀಸರು ತೀರ್ಮಾನಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆದರೆ ಅದನ್ನು ಒಪ್ಪದ ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಸಿಬಿಐ ತನಿಖೆಗಾಗಿ ನ್ಯಾಯಾಂಗ ಹೋರಾಟ ನಡೆಸಿದ್ದರು. ಕೊನೆಗೆ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.
ತನಿಖೆ ನಡೆಸಿದ ಸಿಬಿಐ ಮಾಜಿ ಸಚಿವ ವಿನಯ್ಕುಲಕರ್ಣಿ, ಒಬ್ಬ ಎಸಿಪಿ, ಮತ್ತೊಬ್ಬ ಇನ್್ಸಸ್ಪೆಕ್ಟರ್ ಸೇರಿದಂತೆ 21 ಮಂದಿಯನ್ನು ಆರೋಪಿಗಳೆಂದು ಗುರುತಿಸಿತ್ತು. ಅವರಲ್ಲಿ ಮೊದಲ ಆರೋಪಿ ಬಸವರಾಜ್ ಮುತ್ತಗಿ ಪ್ರಮುಖರಾಗಿದ್ದಾರೆ. ಅವರಿಗೂ ಮತ್ತು ಯೋಗೇಶ್ಗೌಡ ಅವರಿಗೂ ಜಮೀನಿನ ತಕರಾರಿತ್ತು ಎಂದು ಬಿಂಬಿಸಲಾಗಿತ್ತು.
ವಿಕ್ರಮ್ ಬಳ್ಳಾರಿ, ಕೀರ್ತಿಕುಮಾರ್, ಸಂದೀಪ್, ವಿನಾಯಕ್, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್್ಥ, ಕೆ.ಎಸ್.ಸುನೀಲ್, ನಜರ್ ಅಹಮದ್, ಶಹಾನ ವಾಜ್, ನೂತನ್, ಹರ್ಷಿತ್, ವಿನಯ್ಕುಲಕರ್ಣಿ, ಚಂದ್ರಶೇಖರ್ ಇಂಡಿ, ಶಿವಾನಂದ ಬೀರಾದಾರ್, ವಿಕಾಸ್ ಕಲಬುರಗಿ, ಚೆನ್ನಕೇಶ ಟಿಂಗರಿಕರ್, ವಾಸುದೇವ ನೀಲಕಣಿ, ಸೊಮಶೇಖರ ನ್ಯಾಮಗೌಡ ಅವರನ್ನು ಆರೋಪಿಗಳೆಂದು ಗುರುತಿಸಿತ್ತು.
ರಾಜಕೀಯ ದ್ವೇಷವೇ ಕೊಲೆಗೆ ಕಾರಣ ಎಂದು ಸಿಬಿಐ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಕೊಲೆ ಆರೋಪಿಗಳ ಜೊತೆ ವಿನಯ್ಕುಲಕರ್ಣಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತು. ಒಟ್ಟು 3 ಚಾರ್ಜ್ಶೀಟ್ಗಳು ಸಲ್ಲಿಕೆಯಾಗಿದ್ದು, 113 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 40 ಜನ ಸಾಕ್ಷಿಗಳು ತಮ ಹೇಳಿಕೆಗೆ ಬದ್ಧರಾಗಿರಬೇಕು ಎಂಬ ಕಾರಣಕ್ಕೆ ಸೆಕ್ಷನ್ 164ರ ಅಡಿ ನ್ಯಾಯಾಧೀಶರ ಮುಂದೆ ವಿಡಿಯೋ ಸಾಕ್ಷ್ಯವನ್ನು ದಾಖಲಿಸಿದ್ದಾರೆ.
2020ರಲ್ಲಿ ವಿನಯ್ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು.ಮಧ್ಯಭಾಗದಲ್ಲಿ ಜಾಮೀನು ದೊರಕಿತ್ತು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಮನವಿ ಮೇರೆಗೆ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿತ್ತು.
2023ರ ಚುನಾವಣೆಯನ್ನು ವಿನಯ್ಕುಲಕರ್ಣಿ ಜೈಲಿನಲ್ಲಿದ್ದುಕೊಂಡೇ ಗೆದ್ದಿದ್ದರು. ಚುನಾವಣೆಯಲ್ಲಿ ವಿನಯ್ಕುಲಕರ್ಣಿ ಅವರ ಪತ್ನಿ ಹಾಗೂ ಪುತ್ರಿ ಪ್ರಚಾರ ನಡೆಸಿದ್ದರು. ಅನಂತರ ವಿನಯ್ಕುಲಕರ್ಣಿ ಕಳೆದ 6 ವರ್ಷಗಳಿಂದಲೂ ಧಾರವಾಡಕ್ಕೆ ಕಾಲಿಡಲಾಗದಂತೆ ನ್ಯಾಯಾಲಯ ದಿಗ್ಬಂಧನ ವಿಧಿಸಿದೆ.ಇಂದು ಜನಪ್ರತಿನಿಧಿ ನ್ಯಾಯಾಲಗಳು ಪ್ರಕಟಿಸುವ ತೀರ್ಪಿನಲ್ಲಿ ವಿನಯ್ಕುಲಕರ್ಣಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
